ಮದುವೆಗೆ ‘ಧೋತಿ ಕುರ್ತಾ’ ಬದಲು ‘ಶೇರ್ವಾನಿ’ ಧರಿಸಿ ಬಂದ ವರ !! | ಇಷ್ಟಕ್ಕೇ ಕಲ್ಲು ತೂರಾಟ ನಡೆಸಿ ಹಿಂಸಾಚಾರ ಸೃಷ್ಟಿಸಿದ ವಧು ಕುಟುಂಬ

ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ವಧು-ವರರ ಮನೆಯವರು ಯರ್ರಾಬಿರ್ರಿ ಜಗಳ ಮಾಡುವುದು ಹೆಚ್ಚಾಗಿದೆ. ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂತೆಯೇ ಇಲ್ಲೊಂದು ಮದುವೆಯಲ್ಲಿ ವರನೊಬ್ಬ ‘ಧೋತಿ ಕುರ್ತಾ’ ಬದಲು ‘ಶೇರ್ವಾನಿ’ ಧರಿಸಿ ಮದುವೆ ಮನೆಗೆ ಒಂದಿದ್ದಕ್ಕೆ ಹಿಂಸಾಚಾರದ ವಾತಾವರಣ ಸೃಷ್ಟಿಯಾದ ನಡೆದಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಮದುವೆ ಮನೆಯಲ್ಲಿ ವರ ‘ಧೋತಿ ಕುರ್ತಾ’ ಬಂದಲು ‘ಶೇರ್ವಾನಿ’ ಹಾಕಿದ್ದಕ್ಕೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ‘ಧೋತಿ ಕುರ್ತಾ’ ಧರಿಸದ ಕಾರಣ ವರ ಮತ್ತು ವಧುವಿನ ಕುಟುಂಬದವರ ನಡುವೆ ವಾಗ್ವಾದ ನಡೆದಿದ್ದು, ಎರಡು ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಧುವಿನ ಕುಟುಂಬವು ವರನು ತಮ್ಮ ಬುಡಕಟ್ಟು ಸಂಪ್ರದಾಯದಂತೆ ಮದುವೆ ವೇಳೆ ‘ಧೋತಿ-ಕುರ್ತಾ’ ಧರಿಸಬೇಕು. ‘ಶೆರ್ವಾನಿ’ ಅಲ್ಲ ಎಂದು ಹೇಳಿದರು. ಆದರೆ ಧಾರ್ ನಗರದ ನಿವಾಸಿಯಾದ ವರ ಸುಂದರ್‌ಲಾಲ್ ಅವರು ಶೆರ್ವಾನಿ ಧರಿಸಿದ್ದ. ಈ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬದವರು ವಾಗ್ವಾದ ಮಾಡಲು ಪ್ರಾರಂಭ ಮಾಡಿದ್ದಾರೆ. ಇದು ಅತಿರೇಕಕ್ಕೆ ಹೋಗಿ ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆ ಹಲವರಿಗೆ ಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾರೆ ಎಂದು ಧಮನೋಡ್ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ನಂತರ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಮನೋದ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ವಧುವಿನ ಸಂಬಂಧಿಕರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಠಾಣೆಯಲ್ಲಿ ಕೆಲವು ಮಹಿಳೆಯರು ಆರೋಪಿಸಿದ್ದಾರೆ.

ವರ ಸುಂದರ್‌ಲಾಲ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು, ವಧುವಿನ ಕುಟುಂಬದೊಂದಿಗೆ ನಮಗೆ ಯಾವುದೇ ತೊಂದರೆಯಿಲ್ಲ. ಆದರೆ ಆಕೆಯ ಕೆಲವು ಸಂಬಂಧಿಕರು ನಮ್ಮ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿವಾದವು ಉಡುಪಿನ ಬಗ್ಗೆ ಪ್ರಾರಂಭವಾಯಿತು. ಆದರೆ ಕೊನೆಗೆ ಅದು ತೀವ್ರವಾಯಿತು. ನಮ್ಮ ಮೇಲೆ ಹಲ್ಲೆ ಮತ್ತು ಕಲ್ಲು ತೂರಾಟದಲ್ಲಿ ತೊಡಗಿರುವರ ವಿರುದ್ಧ ಮಾತ್ರ ಕ್ರಮಕೈಗೊಳ್ಳಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

Leave A Reply

Your email address will not be published.