ಫ್ರೀ ಸೀರೆಗಾಗಿ ಸೇರಿದ ಜನಜಂಗುಳಿ: ತಾಯಿ, ಮಗು ಪರದಾಟ, ಕಾಪಾಡಿ ಎಂದು ಅತ್ತ ತಾಯಿ!

ನಿನ್ನೆ ವಿಶ್ವತಾಯಂದಿರ ದಿನಾಚರಣೆಯ ಅಂಗವಾಗಿ,
ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಶ್ರೀಧರ್‌ಗೌಡ ಭಾನುವಾರ ವಿಶ್ವ ತಾಯಂದಿರ ದಿನ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತಾಯಂದಿರಿಗೆ ಸೀರೆ ಹಂಚುವ ಕಾರ್ಯಕ್ರಮವನ್ನು ಕೂಡಾ ಆಯೋಜನೆ ಮಾಡಲಾಗಿತ್ತು.

ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವೆ ಉಮಾಶ್ರೀ, ಚಲನಚಿತ್ರ ನಟಿಯರಾದ ಸಾನ್ವಿ ಶ್ರೀವಾತ್ಸವ್, ಮಿಲನನಾಗರಾಜ್, ಸಾಧುಕೋಕಿಲ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಕಾರಣದಿಂದ ಸಹಜವಾಗಿ ಕಾರ್ಯಕ್ರಮದಲ್ಲಿ ಸಾವಿರಾರು ಜನ ತಾಯಂದಿರು ಸೇರಿದ್ದು, ಆದರೆ ಕಾರ್ಯಕ್ರಮದಲ್ಲಿ ಆದ ಸಣ್ಣ ಎಡವಟ್ಟಿನಿಂದ ತಾಯಿ, ಮಗು ಅಪಾಯದ ಕ್ಣಣ ಎದುರಿಸಿದ್ದು, ಆತಂಕಕ್ಕೆ ಕಾರಣವಾಗಿತ್ತು.

ಸುತ್ತಲೂ ಸಾವಿರಾರು ಜನ, ಸಾವಿರಾರು ಜನರ ನೂಕುನುಗ್ಗಲಲ್ಲಿ ನಿಂತ ತಾಯಿಯೊಬ್ಬಳು ತನ್ನ ಮಗುವನ್ನು ಕೈಯಲ್ಲಿ ಎತ್ತಿಹಿಡಿದು ಕೂಗಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಸೀರೆ ಹಂಚಿಕೆ ಮಾಡಲು ಮುಂದಾದಾಗ ಜನಸಂದಣಿಯಲ್ಲಿ ಸಿಲುಕಿಕೊಂಡ ತಾಯಿ-ಮಗು ನರಳಾಡಿದರು.

ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲದಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ಸೀರೆ ಹಂಚಿಕೆ ವಿಷಯ ತಿಳಿದು ಒಮ್ಮೆಲೆ ಸಾವಿರಾರು ಮಹಿಳೆಯರು ಮುಗಿಬಿದ್ದ ಪರಿಣಾಮ, ಮಧ್ಯದಲ್ಲಿ ಸಿಲುಕಿದ ತಾಯಿ ಹಾಗೂ ಅಲ್ಲೇ ಇದ್ದ ಮಗು ಹೊರಬರಲಾರದೆ ಕಂಗಾಲಾಗಿ ಹೋದ್ರು. ಮಗುವನ್ನು ಹಿಡಿದಿದ್ದವರು ಕೈಮೇಲೆತ್ತಿ ಮಗು ರಕ್ಷಣೆಗೆ ಮುಂದಾಗಿರುವುದು ಕಂಡು ಬಂದಿದೆ. ಈ ಸನ್ನಿವೇಶ ಒಂದು ಕ್ಷಣ ಭಯದ ವಾತಾವರಣವನ್ನೇ ಮೂಡಿಸಿತ್ತು.

ಹಾಗೋ ಹೀಗೋ ಗುಂಪಿನಲ್ಲಿ ಸಿಲುಕಿದ್ದವರು ಸೇಫಾಗಿ ಹೊರ ಬಂದಿದ್ದಾರೆ. ಆದರೆ ಇಷ್ಟು ದೊಡ್ಡಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಿದಾಗ ಆದಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು.

Leave A Reply

Your email address will not be published.