ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ವ್ಯಕ್ತಿ ಸ್ಥಳದಲ್ಲೇ ಸಾವು, ಸಹಸವಾರ ಗಂಭೀರ

ಬೆಳ್ತಂಗಡಿ :ಮುಂಡಾಜೆಯ ಶಾರದಾನಗರದಲ್ಲಿ ಬೈಕ್ ಸ್ಕಿಡ್ ಆಗಿ ಫೋನ್ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿ, ಸಹಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಕಡಿರುದ್ಯಾವರ ನಿವಾಸಿ ಯಶೋಧರ ದೇವಾಡಿಗ(30) ಮೃತರು. ಸಹಸವಾರ ಕಡಿರುದ್ಯಾವರ ನಿವಾಸಿ ಅಶೋಕ್ ಗೌಡ (32) ಗಂಭೀರ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮಂತ್ತಡ್ಕದಿಂದ ನಿನ್ನೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಗಾರೆ ಕೆಲಸ ಮುಗಿಸಿ ಕಡಿರುದ್ಯಾವರದ ಮನೆಗೆ ವಾಪಸ್ ಬೈಕಲ್ಲಿ ಬರುತ್ತಿದ್ದಾಗ ಮುಂಡಾಜೆ ಗ್ರಾಮದ ಶಾರದಾ ನಗರದ ಬಳಿ ಬೈಕ್ ಸ್ಕಿಡ್ ಆಗಿ ಫೋನ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ಮತ್ತು ಸಹಸವಾರ ರಸ್ತೆಗೆ ಎಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ದಾರಿಮಧ್ಯೆ ಸವಾರ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.