10 ತಿಂಗಳ ನಂತರ ವಿದೇಶದಿಂದ ಊರಿಗೆ ಬಂದ ದಿನವೇ ದಂಪತಿಗಳ ಮರ್ಡರ್| ಮನೆಯ ಕಾರು ಚಾಲಕನೇ ಮಾಡಿದ್ದ ಡಬಲ್ ಮರ್ಡರ್ ಪ್ಲ್ಯಾನಿಂಗ್!

ಈಗಿನ ಕಾಲದಲ್ಲಿ ಯಾರನ್ನೂ ನಂಬುವ ಹಾಗೇ ಇಲ್ಲ. ಅನ್ನ ಹಾಕಿದ ಮಾಲೀಕನನ್ನೇ ಕೊಲ್ಲುವ ಕಾಲ ಬಂದಿದೆ. ತಮ್ಮ ಮಗಳನ್ನು ನೋಡಲೆಂದು 10 ತಿಂಗಳ ಹಿಂದೆ ಹೊರದೇಶಕ್ಕೆ ಹೋದ ದಂಪತಿ ವಾಪಾಸು ಊರಿಗೆ ಬಂದ ಒಂದೇ ದಿನದಲ್ಲಿ ಕೊಲೆಯಾಗಿದ್ದಾರೆ. ಇಂತಹ ದುರದೃಷ್ಟಕರ ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ.

ಮೃತರನ್ನು ಮೈಲಾಪುರದ ದ್ವಾರಕಾ ಕಾಲೋನಿ ನಿವಾಸಿಗಳಾದ 58 ವರ್ಷದ ಶ್ರೀಕಾಂತ್ ಮತ್ತು 53 ವರ್ಷದ ಅನುರಾಧ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಕಾಂತ್ ಅವರು ಗುಜರಾತ್‌ನಲ್ಲಿ ಸಾಫ್ಟ್‌ವೇರ್ ಸಂಸ್ಥೆ ನಡೆಸುತ್ತಿದ್ದರು. ಅವರ ಮನೆಯಲ್ಲಿ 11 ವರ್ಷದಿಂದ ಕೆಲಸ ಮಾಡುತ್ತಿದ್ದ ಕಾರು ಚಾಲಕ ಕೃಷ್ಣ ಶನಿವಾರ ಬೆಳಗಿನ ಜಾವ 3.30ರ ಸುಮಾರಿಗೆ ಅವರಿಬ್ಬರನ್ನೂ ವಿಮಾನ ನಿಲ್ದಾಣದಿಂದ ಕರೆದುಕೊಂಡು ಬಂದಿದ್ದ. ಅವರಿಬ್ಬರೂ 10 ತಿಂಗಳ ಹಿಂದೆ ತಮ್ಮ ಮಗಳನ್ನು ನೋಡಲು ಅಮೆರಿಕಾಗೆ ಹೋದವರು ಶನಿವಾರ ಬೆಳಗ್ಗೆ ವಾಪಾಸ್ ಬಂದಿದ್ದರು.

ಆದರೆ, ವಿಧಿಯಾಟ ಬೇರೇನೇ ಬರೆದಿತ್ತು. ಅದೇ ಅವರ ಪಾಲಿಗೆ ಅಂತಿಮ ದಿನವಾಗಿತ್ತು. ಅವರು ಮನೆಗೆ ಬಂದ ಒಂದೆರಡು ಗಂಟೆಗಳ ನಂತರ ಅವರ ಮಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಈ ಡಬಲ್ ಮರ್ಡರ್ ಬೆಳಕಿಗೆ ಬಂದಿದೆ. ಪದೇಪದೇ ಅಪ್ಪ ಅಮ್ಮನ ಫೋನ್ ಸ್ವಿಚ್ ಆಫ್ ಆಗಿದೆ ಎಂಬ ಮೆಸೇಜ್ ಬರುತ್ತಿದ್ದಂತೆ ಆಕೆ ಗಾಬರಿಗೊಂಡು ಅಡ್ಯಾರ್‌ನಲ್ಲಿರುವ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಮನೆಗೆ ದೌಡಾಯಿಸಿದ ಸಂಬಂಧಿಗೆ ಆ ಮನೆಯಲ್ಲಿ ಎಲ್ಲೂ ಶ್ರೀಕಾಂತ್ ಮತ್ತು ಅನುರಾಧಾ ಕಾಣಲಿಲ್ಲ. ಇದರಿಂದ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ಕಾರಿನ ಚಾಲಕ ಕೃಷ್ಣ ಕೂಡ ನಾಪತ್ತೆಯಾಗಿದ್ದು, ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮನೆಯಲ್ಲಿದ್ದ ಸ್ಟೀಲ್ ಬೀರುವನ್ನು ಒಡೆಯಲಾಗಿತ್ತು. ಆರಂಭದಲ್ಲಿ ಕೃಷ್ಣನೇ ಆ ದಂಪತಿಯನ್ನು ಕಿಡ್ನ್ಯಾಪ್ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು‌. ಆದರೆ, ಆ ದಂಪತಿಯ ಶವ ಪತ್ತೆಯಾದ ನಂತರ ಕೃಷ್ಣನೇ ಅವರನ್ನು ಕೊಲೆ ಮಾಡಿದ್ದಾನೆ ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು.

ತನಿಖೆ ನಡೆಸಿದ ಪೊಲೀಸರಿಗೆ ತಿಳಿದು ಬಂದಿರುವುದೇನೆಂದರೆ, 10 ವರ್ಷಗಳಿಂದ ಅವರ ಬಳಿ ಕೆಲಸ ಮಾಡುತ್ತಿದ್ದ ಚಾಲಕ ಕೃಷ್ಣ ದಂಪತಿಯನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರುವಾಗ ಅಪಹರಿಸಿ ಅವರ ಮನೆಯ ಬದಲಾಗಿ ನೆಮಿಲಿಚೇರಿಯಲ್ಲಿರುವ ಅವರ ಫಾರ್ಮ್‌ಹೌಸ್‌ಗೆ ಕರೆದೊಯ್ದಿದ್ದಾನೆ.

ದಂಪತಿ ಮನೆಗೆ ಬಂದ ಕೂಡಲೇ ಕೃಷ್ಣ ಮತ್ತು ಆತನ ಸಹಚರ ರವಿ ಅವರನ್ನು ಹರಿತವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಸೇರಿ ಮನೆಯ ರಕ್ತದ ಕಲೆಗಳನ್ನು ಒರೆಸಿ ಶವಗಳನ್ನು ನೆಮಿಲಿ ಸಮೀಪದ ಅತಿಥಿ ಗೃಹಕ್ಕೆ ಕೊಂಡೊಯ್ದು ಹೊಂಡದಲ್ಲಿ ಹೂತು ಹಾಕಿದ್ದಾರೆ. ನಂತರ ಕಾರಿನಲ್ಲಿದ್ದ ವಸ್ತುಗಳನ್ನು ದೋಚಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದಾರೆ.

ಕೃಷ್ಣ ದಂಪತಿಯನ್ನು ಕೊಲೆ ಮಾಡಿ ತೋಟದಲ್ಲಿ ಹೂತು ಹಾಕಿದ್ದ. ಪೊಲೀಸರು ಕೃಷ್ಣನನ್ನು ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದಾರೆ. ದಂಪತಿಯಿಂದ 4 ಲಕ್ಷ ಹಾಗೂ 50 ಪವನ್ ಚಿನ್ನಾಭರಣ ಕದ್ದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೃಷ್ಣನನ್ನು ವಿಚಾರಣೆ ನಡೆಸಲಾಗುತ್ತಿದೆ.

Leave A Reply

Your email address will not be published.