ತಾಯಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಬಂದ ಯುವತಿಗೆ ಆರೋಗ್ಯ ಸಿಬ್ಬಂದಿಯೊಡನೆ ಮೊಳಕೆಯೊಡೆದ ಪ್ರೀತಿ !! | ಐದು ದಿನದ ಪ್ರೇಮ, ಏಳನೇ ದಿನಕ್ಕೆ ಪವಿತ್ರ ವಿವಾಹ ಬಂಧನ

ಪ್ರೀತಿ ಒಂದು ಮಾಯೆ. ಅದು ಯಾವಾಗ, ಹೇಗೆ, ಯಾರ ಮೇಲೆ ಆಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಪ್ರೀತಿ ನಿಜವಾಗಿದ್ದರೆ ಅದೆಷ್ಟೇ ಅಡೆ ತಡೆಗಳಿದ್ದರೂ ಜೋಡಿಯನ್ನು ಒಂದಾಗಿಸುತ್ತದೆ. ಸದ್ಯ ಇದೇ ರೀತಿಯ ಪ್ರೇಮ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೇವಲ ಐದೇ ದಿನಗಳಲ್ಲಿ ಜೋಡಿ ಮನೆಯವರನ್ನೆಲ್ಲಾ ಒಪ್ಪಿಸಿ ವರದಕ್ಷಿಣೆ ರಹಿತ ಮದುವೆಯಾಗಿದೆ. ವಿಶೇಷವೆಂದರೆ ಆಸ್ಪತ್ರೆಯಿಂದ ಶುರುವಾದ ಈ ಪ್ರೀತಿ, ದೇಗುಲಕ್ಕೆ ತಲುಪಿದ್ದು, ಈ ಜೋಡಿ ದೇವರ ಸಾಕ್ಷಿಯಾಗಿ ವಿವಾಹ ಬಂಧನಕ್ಕೊಳಗಾಗಿದ್ದಾರೆ.

ವಾಸ್ತವವಾಗಿ, ಬಿಹಾರದ ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತ ತನ್ನ ತಾಯಿಗೆ ಚಿಕಿತ್ಸೆ ನೀಡಲು ಬಂದ ಯುವತಿಗೆ ಹೃದಯ ಕೊಟ್ಟಿದ್ದಾರೆ. ಅಲ್ಲದೇ ಈ ವೈದ್ಯಕೀಯ ಸಿಬ್ಬಂದಿ ಐದೇ ದಿನದಲ್ಲಿ ತನ್ನ ಪ್ರೇಯಸಿಯನ್ನು ಮಡಿದಿಯಾಗಿಸಿಕೊಂಡಿದ್ದಾನೆ ಬೇರೆ. ನಗರದ ಪಾತಾಳೇಶ್ವರ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವರದಕ್ಷಿಣೆ ರಹಿತ ಮದುವೆ ಆಗಿದ್ದಾನೆ.

ಪ್ರೀತಿ ಸಿಂಗ್ ಎಂಬ ಯುವತಿ ತನ್ನ ತಾಯಿಯನ್ನು ಚಿಕಿತ್ಸೆಗಾಗಿ ಹಾಜಿಪುರ ಸದರ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಅವರು ಪೋಸ್ಟಿಂಗ್‌ನಲ್ಲಿದ್ದ ಆರೋಗ್ಯ ಕಾರ್ಯಕರ್ತ ಮಣಿಂದರ್ ಕುಮಾರ್ ಸಿಂಗ್ ಅವರನ್ನು ಭೇಟಿಯಾದರು. ಆ ಭೇಟಿ ಯಾವಾಗ ಪ್ರೇಮಕ್ಕೆ ತಿರುಗಿತು ಎಂಬುದು ಇಬ್ಬರಿಗೂ ತಿಳಿಯಲಿಲ್ಲ. ತಡ ಮಾಡದೆ ಹುಡುಗ ಹುಡುಗಿಯ ಮುಂದೆ ಮದುವೆಯ ಪ್ರಸ್ತಾಪ ಇಟ್ಟಿದ್ದಾನೆ. ಹುಡುಗಿಗೆ ತಂದೆಯಿಲ್ಲದ ಕಾರಣ, ಹುಡುಗಿ ತಾಯಿಯ ಅನುಮತಿ ತೆಗೆದುಕೊಳ್ಳುವಂತೆ ಹೇಳಿದ್ದಾಳೆ. ಆ ಮೇಲೆ ಹುಡುಗ ಯುವತಿಯ ತಾಯಿಗೆ ವರದಕ್ಷಿಣೆ ರಹಿತ ಮದುವೆಯನ್ನು ಪ್ರಸ್ತಾಪಿಸಿದನು. ಅದನ್ನು ಹುಡುಗಿಯ ತಾಯಿ ಸಂತೋಷದಿಂದ ಒಪ್ಪಿಕೊಂಡಿದ್ದಾರೆ.

ಈ ಪ್ರೇಮ ಪ್ರಕರಣದಲ್ಲಿ ಐದು ದಿನಗಳ ಪ್ರೇಮ, ಏಳನೇ ದಿನಕ್ಕೆ ಪವಿತ್ರ ವಿವಾಹವಾಗಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಗರದ ಪಾತಾಳೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪ್ರೀತಿ ಮಾಡಿ ಮೋಸ ಮಾಡಲು ಹೋಗದೆ, ನೇರವಾಗಿ ಮದುವೆಯ ಪ್ರಸ್ತಾಪವಿಟ್ಟದ್ದೇ ಇಷ್ಟು ಬೇಗ ಈ ವಿವಾಹ ನೆರವೇರಲು ಕಾರಣ ಎಂದೇ ಹೇಳಬಹುದು.

Leave A Reply

Your email address will not be published.