ಕಡಬ ಸಮುದಾಯ ಆಸ್ಪತ್ರೆಯ ಸಿಬ್ಬಂದಿಯ ಎಡವಟ್ಟು |ಗಾಯದ ಒಳಗಡೆ ಕಲ್ಲು, ಮಣ್ಣು, ಜತೆಗೆ ಹೊಲಿಗೆ ಹಾಕಿದ ಆಸ್ಪತ್ರೆ ಸಿಬ್ಬಂದಿ?

ಕಡಬ: ಬೇಜವಾಬ್ದಾರಿ ವಿಚಾರದಲ್ಲಿ ಸುದ್ದಿಯಾಗುತ್ತಿರುವ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಹೀಗೊಂದು ಘಟನೆ ನಡೆದಿದ್ದು, ಬೈಕ್ ಅಪಘಾತ ಗಾಯಾಳುವಿನ ಗಾಯದಲ್ಲಿ ಬರೋಬ್ಬರಿ 14 ಕಲ್ಲುಗಳಿದ್ದರೂ ಅದನ್ನು ಶುಚಿಗೊಳಿಸದೆ ಹೊಲಿಗೆ ಹಾಕಿದ ಪರಿಣಾಮ ಗಾಯ ಉಲ್ಬಣಗೊಂಡು ಗಾಯಾಳು ಕಂಗಲಾದ ಘಟನೆ ನಡೆದಿದೆ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಕಲ್ಲುಗಳನ್ನು ಹೊರತೆಗೆಯಲಾಗಿದೆ.

ಘಟನೆಯ ವಿವರ

ಕೋಡಿಂಬಾಳ ಗ್ರಾಮದ ಕಲ್ಪುರೆ ನಿವಾಸಿ, ರೈಲ್ವೇ ಉದ್ಯೋಗಿ ಪುರುಷೋತ್ತಮ ಎಂಬವರು ಏ.25ರಂದು ಸೋಮವಾರ ರಾತ್ರಿ ತನ್ನ ಪತ್ನಿಯೊಂದಿಗೆ ಸಂಬಂಧಿಕರ ಮನೆಗೆಂದು ಹೊರಟ್ಟಿದ್ದು, ಕೋಡಿಂಬಾಳ ಸಮೀಪದ ಉಂಡಿಲ ಎಂಬಲ್ಲಿ ಅವರ ಸ್ಕೂಟಿ ಸ್ಕೀಡ್ ಆಗಿ ಬಿದ್ದಿದ್ದು ಅವರ ಮೊಣ ಕಾಲಿಗೆ ಗಾಯವಾಗಿತ್ತು, ಕೂಡಲೇ ಪುರುಷೋತ್ತಮ ಹಾಗೂ ಅವರ ಪತ್ನಿಯನ್ನು ಜೇಸಿಐನ ರಮೇಶ್ ಕೊಠಾರಿ ಹಾಗೂ ಪ್ರಮುಖರಾದ ರಘುರಾಮ ಕುಕ್ಕೆರೆಬೆಟ್ಟು, ಪ್ರಶಾಂತ್ ಕೋಡಿಂಬಾಳ, ದಿನೇಶ್ ಮಾಸ್ತಿ, ಜನಾರ್ಧನ ಅವರುಗಳು ಕಡಬ ಸಮುದಾಯ ಆಸ್ಪತ್ರೆಗೆ ಕರೆ ತಂದಿದ್ದರು, ಈ ವೇಳೆ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಗಾಯಕ್ಕೆ ಸ್ಟಿಚ್ ಹಾಕುವಂತೆ ಸೂಚಿಸಿದ್ದರು, ಈ ಸಂದರ್ಭದಲ್ಲಿ ದಾದಿಯರು ಹಾಗೂ ಸಿಬ್ಬಂದಿಗಳು ಗಾಯಕ್ಕೆ ಸ್ಟಿಚ್ ಹಾಕಿದ್ದರು, ಬಳಿಕ ಪುರುಷೋತ್ತಮ ಹಾಗೂ ಅವರ ಪತ್ನಿಯನ್ನು ಆಸ್ಪತ್ರೆಗೆ ಕರೆತಂದ ಸ್ಥಳೀಯರು ಪುನಃ ಮನೆಗೆ ತಲುಪಿಸಿದ್ದರು.

ಗಾಯ ಉಲ್ಬಣ:

ಇದಾದ ವಾರದ ಬಳಿಕವೂ ಗಾಯ ಗುಣವಾಗದೆ, ಉಲ್ಬಣಗೊಂಡಿತ್ತು, ಈ ಬಗ್ಗೆ ಪುರುಷೋತ್ತಮ ಅವರು ಮೇ.4ರಂದು ಕಡಬದ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಗಾಯದ ಎಕ್ಸರೆ ತೆಗೆಸಿದ್ದರು, ಇದೇ ಸಮಯದಲ್ಲಿ ಆ ಕ್ಲಿನಿಕ್ ನಲ್ಲಿದ್ದ ತಜ್ಞ ವೈದ್ಯರು ಎಕ್ಸರೆ ಪರಿಶೀಲಿಸಿದ್ದು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು, ಈ ಹಿನ್ನಲೆಯಲ್ಲಿ ಪುರುಷೋತ್ತಮ ಅವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಬರೋಬ್ಬರಿ 14 ಕಲ್ಲು!

ಆಸ್ಪತ್ರೆಯಲ್ಲಿ ಮೇ.4ರಂದು ರಾತ್ರಿ ಸರ್ಜರಿ ನಡೆಸಲಾಗಿದ್ದು ಈ ವೇಳೆ ವೈದ್ಯರಿಗೆ ಬರೋಬ್ಬರಿ 14 ಕಲ್ಲುಗಳು ದೊರೆತಿದೆ. ಗಾಯವಾದ ಆ ದಿನವೇ ಸ್ಟಿಚ್ ಮಾಡುವಾಗ ಸರಿಯಾಗಿ ಶುಚಿಗೊಳಿಸಿ ಸ್ಟಿಚ್ ಮಾಡುತ್ತಿದ್ದರೆ ಗಾಯ ಉಲ್ಬಣಗೊಳ್ಳುವ ಪ್ರಮೇಯ ಉಂಟಾಗುತ್ತಿರಲಿಲ್ಲ ಎಂದು ವೈದ್ಯರ ಮೂಲದಿಂದ ತಿಳಿದು ಬಂದಿದೆ.

ಕಡಬ ಆಸ್ಪತ್ರೆಯಲ್ಲಿನ ನಿರ್ಲಕ್ಷಕ್ಕೆ ಕೊನೆ ಇಲ್ಲವೆ?

ಕಡಬ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು, ಸಿಬ್ಬಂದಿಗಳು ಮಾಡುತ್ತಿರುವ ನಿರ್ಲಕ್ಷಕ್ಕೆ ಕೊನೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉಂಟಾಗಿದೆ. ಯಾವುದೇ ಸಮಸ್ಯೆಯನ್ನು ಆಸ್ಪತ್ರೆಯವರ ಗಮನಕ್ಕೆ ತಂದರೂ ಅದನ್ನು ಸರಿಪಡಿಸಿಕೊಳ್ಳುವ ಬದಲಿಗೆ ದೂರು ನೀಡಿದಾತನ ಮೇಲೆಯೇ ಸೇಡು ತೀರಿಸಿಕೊಳ್ಳುವ ಈ ಸರಕಾರಿ ಆಸ್ಪತ್ರೆಯ ವ್ಯವಸ್ಥೆಯನ್ನು ಕೇಳುವವರೇ ಇಲ್ಲದಂತಾಗಿದೆ. ಇನ್ನಾದರೂ ಮೇಲಾಧಿಗಳು ಈ ಆಸ್ಪತ್ರೆಯಲ್ಲಿ ನಿರ್ಲಕ್ಷ ಮತ್ತು ಬೇಜವಾಬ್ದಾರಿಯಾಗಿ ವರ್ತಿಸುವವರಿಗೆ ಚಿಕಿತ್ಸೆ ನೀಡಬೇಕಿದೆ.

1 Comment
  1. najlepszy sklep says

    Wow, marvelous weblog structure! How lengthy have you been running
    a blog for? you make blogging look easy. The full glance of your website is magnificent,
    let alone the content material! You can see similar here ecommerce

Leave A Reply

Your email address will not be published.