ರಾಜ್ಯದಲ್ಲಿ ಶೀಘ್ರದಲ್ಲೇ ಸಂಪುಟ ಪುನಾರಚನೆ : ಹೊಸಮುಖ ಸಂಪುಟಕ್ಕೆ ಸೇರ್ಪಡೆ! ಯಾರಿಗೆಲ್ಲಾ ಕೊಕ್?
ರಾಜ್ಯದಲ್ಲಿ ಸಂಪುಟ ಪುನಾರಚನೆಗೆ ದಿನಾಂಕ ನಿಗದಿಯಾಗಿದೆ ಎಂಬ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇದೇ ತಿಂಗಳ 10ನೇ ತಾರೀಖಿನಂದು ರಾಜ್ಯದಲ್ಲಿ ಸಂಪುಟ ಪುನಾರಚನೆಗೊಳ್ಳಲಿದೆ ಎಂಬ ಮಾಹಿತಿ ಇದೆ. ಸಂಪುಟದಲ್ಲಿ ಯಾರ್ಯಾರಿಗೆ ಕೊಕ್ ನೀಡಬೇಕು ಹಾಗೂ ಯಾವೆಲ್ಲ ಹೊಸ ಮುಖಗಳನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಎಂ ಬಸವರಾಜ ಬೊಮ್ಮಾಯಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ಸಿಎಂ ಬಸವರಾಜ ಬೊಮ್ಮಾಯಿಗೆ
ಪ್ರಸ್ತುತ ಇರುವ ಆರು ಮಂತ್ರಿಗಳ ಬಳಿಯಲ್ಲಿ ರಾಜೀನಾಮೆ ಕೇಳುವಂತೆ ಸೂಚನೆಯನ್ನು ನೀಡಿದೆಯಂತೆ. ಕಂದಾಯ ಸಚಿವ ಆರ್.ಅಶೋಕ್ ಬಳಿಯಲ್ಲಿ ಸಚಿವ ಸ್ಥಾನದಿಂದ ರಾಜೀನಾಮೆ ಪಡೆದು ಅವರಿಗೆ ಬಿಬಿಎಂಪಿ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳಲು ನೇಮಿಸುವ ಸಾಧ್ಯತೆಯಿದೆ. ಇತ್ತ ಡಾ.ಕೆ ಸುಧಾಕರ್ ವಿರುದ್ಧವೂ ಕೆಲವು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಂದಲೂ ರಾಜೀನಾಮೆ ಪಡೆಯಲು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಇನ್ನುಳಿದಂತೆ ಸಚಿವರಾದ ಶಶಿಕಲಾ ಜೊಲ್ಲೆ ಎಂಟಿಬಿ ನಾಗರಾಜ್, ವಿ.ಸೋಮಣ್ಣ ಹಾಗೂ ಪ್ರಭು ಚವ್ಹಾಣ್ ಈ ಬಾರಿಯ ಸಂಪುಟದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
ಅರವಿಂದ ಬೆಲ್ಲದ್, ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ್ ,ಎನ್.ಮಹೇಶ್, ಪ್ರೀತಂ ಗೌಡ, ಪಿ.ರಾಜೀವ್ ಸೇರಿದಂತೆ ಇನ್ನೂ ಕೆಲವರನ್ನು ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರನ್ನಾಗಿ ಮಾಡಿಕೊಳ್ಳುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.