ರದ್ದಾದ ವಿಶ್ವ ಮಾನವ ಎಕ್ಸ್‌ಪ್ರೆಸ್ ರೈಲು

ಮೈಸೂರು- ಬೆಳಗಾವಿ ನಡುವೆ ಸಂಚರಿಸುವ ವಿಶ್ವ ಮಾನವ ಎಕ್ಸ್‌ಪ್ರೆಸ್ ರೈಲು ರದ್ದಾಗಿರುವ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ವಿಶ್ವ ಮಾನವ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಸಂಪೂರ್ಣವಾಗಿ ದೀರ್ಘಾವಧಿಯವರೆಗೆ ರದ್ದುಗೊಳಿಸಲಾಗುತ್ತಿದೆ. 

ನಿತ್ಯವೂ ಸರಕಾರಿ ಕೆಲಸಕ್ಕೆ ಹೋಗುವವರು, ವಿಧಾನಸೌಧ, ಹೈಕೋರ್ಟ್, ಗಾರ್ಮೆಂಟ್ಸ್‌ಗೆ ಹೋಗುವವರು ಸೇರಿದಂತೆ ನಾನಾ ವರ್ಗದ ಸುಮಾರು 25,000 ಮಂದಿ ಪ್ರಯಾಣಿಕರು ಪ್ರತಿನಿತ್ಯ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಾರೆ. ಇವರೆಲ್ಲ ಪರದಾಡುವಂತಾಗಿದೆ.

ರೈಲ್ವೆ ಇಲಾಖೆ ದೂರದ ಬೆಳಗಾವಿಯಲ್ಲಿ ದುರಸ್ತಿ ಕೆಲಸ ನಡೆಯುತ್ತಿದೆ ಎಂಬ ನೆಪ ಮುಂದಿಟ್ಟುಕೊಂಡು ಮೈಸೂರಿನಿಂದಲೇ ವಿಶ್ವಮಾನವ ರೈಲು ಸೇವೆ ಸ್ಥಗಿತಗೊಳಿಸಿರುವುದು ಸರಿಯಲ್ಲ ಎನ್ನುತ್ತಾರೆ ಪ್ರಯಾಣಿಕರು.

“ವಿಶ್ವ ಮಾನವ ಎಕ್ಸ್‌ಪ್ರೆಸ್ ರೈಲುಗಾಡಿ ಸೇವೆಯನ್ನು ಮೈಸೂರು-ಬೆಂಗಳೂರು ನಡುವೆ ನೀಡಲು ಬೆಂಗಳೂರು ನಿಲ್ದಾಣದಲ್ಲಿ ರೈಲುಗಾಡಿ ನಿಲ್ಲಲು ಸ್ಥಳಾವಕಾಶದ ಕೊರತೆ ಇದೆ. ಮುಂದುವರೆದು ಬೇರೆ ನಿಲ್ದಾಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲು ಬೆಂಗಳೂರು-ಹುಬ್ಬಳ್ಳಿ ನಡುವೆ ಜೋಡಿ ಹಳಿ ನಿರ್ಮಾಣ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ಹೀಗಾಗಿ ದೀರ್ಘಾವಧಿವರೆಗೆ ರದ್ದು ಮಾಡಬೇಕಾಗಿದೆ” ಎಂದು ಮೈಸೂರು ವಿಭಾಗದ ಸೀನಿಯರ್ ಡಿವಿಜನಲ್ ಕಮರ್ಷಿಯಲ್ ಮ್ಯಾನೇಜರ್ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಲೋಂಡಾ-ಬೆಳಗಾವಿ ನಡುವೆ ಒಂದು ತಿಂಗಳಿಂದ ಜೋಡಿ ಹಳಿ ಅಳವಡಿಸುವುದು ಹಾಗೂ ಇಂಟರ್ ಲಾಕಿಂಗ್ ಕೆಲಸ ನಡೆಯುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲು ಸೇವೆಯನ್ನು ಕೆಲಸ ನಡೆಯುತ್ತಿರುವ ಭಾಗದಲ್ಲಿ ಮಾತ್ರ ಮಾರ್ಗ ಬದಲಿಸಿ ಇನ್ನುಳಿದ ಸೇವೆಯನ್ನು ಎಂದಿನಂತೆ ಮುಂದುವರಿಸಲಾಗಿದೆ.

Leave A Reply

Your email address will not be published.