ದಂಪತಿಗಳ ಮಧ್ಯೆ ಕೆಲವೊಂದು ಕಾರಣಗಳಿಂದ ವಿರಸ ಆಗುವುದು ಸಹಜ. ಕೆಲವರು ಇದನ್ನು ಹಿರಿಯರ ಸಮ್ಮುಖದಲ್ಲಿ ಸರಿ ಮಾಡಿಕೊಳ್ಳುತ್ತಾರೆ. ಆದರೆ ಕೆಲವು ದಂಪತಿಗಳ ಮಧ್ಯೆ ಈ ವಿರಸ ಸರಿಯಾಗುವುದಿಲ್ಲಾವೆಂದಾರೆ ವಿಚ್ಛೇದನ ಕೊಡುವುದು, ಕೋರ್ಟ್ ಮೊರೆ ಹೋಗುವುದು ಮಾಮೂಲು.
ಆದರೆ ಕೋರ್ಟ್ ಮೊರೆ ಹೋದರೂ ಕೂಡಾ, ಆರು ತಿಂಗಳ ಸಮಯ ನೀಡಿ, ಮತ್ತೂ ಸಾಮರಸ್ಯ ಮೂಡದಿದ್ದರೆ ಇದು ಕೋರ್ಟ್ ಗೆ ಮನವರಿಕೆ ಆದರೆ ವಿಚ್ಛೇದನದ ಆದೇಶವನ್ನು ಅನಂತರ ಹೊರಡಿಸುತ್ತದೆ. ಇದೆಲ್ಲಾ ಎಲ್ಲರಿಗೂ ತಿಳಿದ ವಿಷಯ. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ದಂಪತಿಯೇ ಮೊದಲು ವಿಚಿತ್ರ ಒಪ್ಪಂದಕ್ಕೆ ಸಹಿ ಹಾಕಿದ್ದು, ಆ ವಿವಾದ ಇದೀಗ ಕೋರ್ಟ್ ಮೆಟ್ಟಿಲೇರಿದೆ. ಅದೇನದು? ಇಲ್ಲಿದೆ ನೋಡಿ ಈ ಅಪರೂಪದಲ್ಲಿ ಅಪರೂಪದ ಘಟನೆ.
ಇಂಥದ್ದೊಂದು ಘಟನೆ ನಡೆದಿರುವುದು ವಡೋದರಾದಲ್ಲಿ. ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲ ಎಂದಾಗ ಈ ದಂಪತಿ ಪರಸ್ಪರ ಒಂದು ವಿಚಿತ್ರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದು ಈಗ ಭಾರಿ ಸುದ್ದಿಯಾಗಿದೆ. ಅದೇನೆಂದರೆ ಮೊದಲು ಮೂರು ವರ್ಷ ಪ್ರತ್ಯೇಕವಾಗಿರೋಣ, ನಂತರ ಪ್ರತ್ಯೇಕವಾಗಿರಲು ಸಾಧ್ಯ ಎಂದಾದರೆ ನಂತರ ವಿಚ್ಛೇದನ ಪಡೆದುಕೊಳ್ಳೋಣ ಎಂಬ ಒಪ್ಪಿಗೆ ಇದಾಗಿದ್ದು, ಇದಕ್ಕೆ ದಂಪತಿ ಸಹಿ ಹಾಕಿದ್ದಾರೆ. ಇದನ್ನು ನೋಟರಿಯ ಸಹಿ ಕೂಡ ಹಾಕಿಸಿದ್ದಾರೆ.
ಆದರೆ ಇಬ್ಬರ ನಡುವೆ ಕಲಹ ಏರ್ಪಟ್ಟು ಅದೀಗ ಕೋರ್ಟ್ ಬಾಗಿಲಿದೆ ಬಂದಿದೆ. ನಡೆದ ವಿಷಯವೇನೆಂದರೆ, ವಡೋದರಾದ ಈ ದಂಪತಿ ಮದುವೆಯಾಗಿ 19 ವರ್ಷಗಳು ಕಳೆದಿವೆ. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಕೆಲ ವರ್ಷಗಳ ಹಿಂದೆ ಇವರಿಬ್ಬರ ನಡುವೆ ಮನಸ್ತಾಪ ಬಂದು ಡಿವೋರ್ಸ್ ಪಡೆದುಕೊಳ್ಳಲು ಇಚ್ಛಿಸಿದ್ದಾರೆ. ಆದರೆ ಏಕಾಏಕಿ ಹೀಗೆ ಮಾಡುವ ಬದಲು ಮೊದಲು ಮೂರು ವರ್ಷ ಪ್ರತ್ಯೇಕವಾಗಿ ಇದ್ದು ನೋಡೋಣ ಎಂದುಕೊಂಡು, ಪ್ರತ್ಯೇಕವಾಗಿ ಒಬ್ಬರನ್ನೊಬ್ಬರು ಬಿಟ್ಟು ಇರಲು ಸಾಧ್ಯ ಎಂದಾದರೆ ನಂತರ ವಿಚ್ಛೇದನ ಪಡೆದುಕೊಳ್ಳೋಣ ಎಂದು ದಾಖಲಿಸಿ ಸಹಿ ಹಾಕಿದ್ದಾರೆ.
ಅಲ್ಲಿಯವರೆಗೆ ಪ್ರತಿ ತಿಂಗಳು ಗಂಡ ಪತ್ನಿಗೆ ಒಂದಿಷ್ಟು ಹಣ, ಉಳಿಯಲು ಫ್ಲ್ಯಾಟ್ ಮತ್ತು ಕಾರನ್ನು ಕೊಡುವುದು ಎಂಬ ಮಾತುಕತೆಯೂ ಆಯಿತು.ಇಷ್ಟು ಮಾತ್ರವಲ್ಲದೇ, ಇಬ್ಬರೂ ಪ್ರತ್ಯೇಕವಾಗಿ ಉಳಿಯಲು ಸಾಧ್ಯ ಎನ್ನುವ ಮಟ್ಟಿಗೆ ಬಂದರೆ ಅನಂತರ ಪತಿ ಆಕೆಗೆ ಅಜೀವ ನಿರ್ವಹಣೆಗಾಗಿ 30 ಲಕ್ಷ ರೂಪಾಯಿಗಳ ಮೊತ್ತದ ಪರಿಹಾರ ನೀಡಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು. ಆದರೆ ಆದದ್ದೇನು? ಇಲ್ಲಿದೆ ಟ್ವಿಸ್ಟ್.
ಆದರೆ ಪ್ರತ್ಯೇಕ ಇರುವಾಗಲೇ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಕಲಹ ಶುರುವಾಯಿತು. ಪತ್ನಿಯ ಮೇಲಿನ ಸಿಟ್ಟಿನಿಂದ ಪತಿ, ಒಪ್ಪಂದದಲ್ಲಿ ತಿಳಿಸಿರುವ ಹಣ ನೀಡಲು ನಿಲ್ಲಿಸಿದ. ಇದರಿಂದ ಸಿಟ್ಟುಗೊಂಡ ಪತ್ನಿ ಕೌಟುಂಬಿಕ ಕೋರ್ಟ್ಗೆ ಮೊರೆ ಹೋಗಿದ್ದಾಳೆ. ಪತಿ ತಮಗೆ ಮೋಸ ಮಾಡಿದ್ದಾರೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ವಿವಾದ ಸದ್ಯ ಕೋರ್ಟ್ನಲ್ಲಿ ಇದ್ದು, ಕೋರ್ಟ್ ಯಾವ ರೀತಿ ತೀರ್ಪು ನೀಡುತ್ತದೆ ಎಂಬುವುದು ಕಾದು ನೋಡಬೇಕಿದೆ.