ಬಂಟ್ವಾಳ : ಸೈಡ್ ಕೊಡುವ ವಿಚಾರದಲ್ಲಿ ಗಲಾಟೆ | ಬೆಂಗಳೂರು ಮೂಲದ ವ್ಯಕ್ತಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಸಹೋದರರು|

ಬಂಟ್ವಾಳ : ಬೆಂಗಳೂರು ಮೂಲದ ವ್ಯಕ್ತಿಯೋರ್ವನಿಗೆ ಮನೆ ಮಂದಿಯ ಎದುರಿನಲ್ಲೇ ಸಹೋದರರಿಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬ್ರಹ್ಮರಕೂಟ್ಲು ಟೋಲ್ ಬಳಿ ನಡೆದಿದೆ.

ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕಣ್ಣೂರು ನಿವಾಸಿಗಳಾದ ಇಸ್ಮಾಯಿಲ್ ಯಾನೆ ಬಾತಿಶ್ ಹಾಗೂ ಯಸೀನ್ ಬಂಧಿತ ಆರೋಪಿಗಳು.

ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಎರಡು ಕಾರುಗಳು ಸೈಡ್ ಕೊಡುವ ವಿಚಾರದಲ್ಲಿ ಕಾರೊಂದರ ಸೈಡ್ ಮಿರರ್ ಗೆ ಡಿಕ್ಕಿಯಾಗಿದೆ. ನಂತರ ಎರಡೂ ಕಾರುಗಳ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಸಹೋದರರಿಬ್ಬರು(ಆರೋಪಿಗಳು) ಬೆಂಗಳೂರು ಮೂಲದ ನಿವಾಸಿ ಭಾಸ್ಕರ್ ಪೈ ಅವರಿಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಭಾಸ್ಕರ ಪೈ ಅವರನ್ನು ನೆಲಕ್ಕುರಳಿಸಿ ಕಾಲಿನಿಂದ ಒದೆಯುವ ದೃಶ್ಯ ಹಾಗೂ ಮನೆಮಂದಿ ಬಿಡುವಂತೆ ಗೊಳಾಡುವ ದೃಶ್ಯ ಟೋಲ್ ಗೇಟ್ ನಲ್ಲಿರುವ ಸಿ.ಸಿ, ಕ್ಯಾಮರಾದಲ್ಲಿ ಸೆರೆಯಾಗಿತ್ತು. ಭಾಸ್ಕರ ಪೈ ಅವರು ಉಡುಪಿಗೆ ಕಾರ್ಯಕ್ರಮವೊಂದಕ್ಕೆ ಮನೆ ಮಂದಿಯ ಜೊತೆಯಲ್ಲಿ ತೆರಳಿ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವ ಸಂದರ್ಭ ಘಟನೆ ನಡೆದಿದೆ.

ಭಾಸ್ಕರ್ ಪೈ ಅವರ ದೂರಿನಂತೆ ವೀಡಿಯೋ ಆಧಾರದ ಮೇಲೆ ಪೊಲೀಸರು ಕಣ್ಣೂರು ನಿವಾಸಿಗಳಾದ ಸಹೋದರರನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಡಿ.ವೈ.ಎಸ್.ಪಿ. ಪ್ರತಾಪ್ ಥೋರಾಟ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನಿರ್ದೇಶನದಂತೆ ನಗರ ಠಾಣಾ ಎಸ್.ಐ.ಅವಿನಾಶ್ ಗೌಡ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

Leave A Reply

Your email address will not be published.