‘ರಾಜ್ಯದಲ್ಲಿ ಮಾಸ್ಕ್ ಕಡ್ಡಾಯವೇ?’ ಎಂಬುದರ ಕುರಿತು ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್

ಮೈಸೂರು : ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾತಾನಾಡಿದ್ದು, ಇನ್ನು ಮುಂದೆ ಮಾಸ್ಕ್ ಕಡ್ಡಾಯ ಮಾಡುವಂತಹ ಪರಿಸ್ಥಿತಿ ಬಂದಿದೆಯೇ, ಇಲ್ಲವೇ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.

‘ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಮಾಡಿ ದಂಡ ವಿಧಿಸುವ ಪರಿಸ್ಥಿತಿ ಇನ್ನೂ ಬಂದಿಲ್ಲ , ಜನ ನಿರ್ಲಕ್ಷ್ಯ ಮಾಡದೇ ಸಮಯಕ್ಕೆ ಸರಿಯಾಗಿ ಎರಡನೇ ಹಾಗೂ ಮೂರನೇ ಡೋಸ್(ಬೂಸ್ಟರ್) ಲಸಿಕೆ ಹಾಕಿಸಿಕೊಳ್ಳಿ’ಎಂದು ಸಚಿವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವುದರಿಂದ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ನಿರ್ದೇಶನಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಮಾಸ್ಕ್ ಕಡ್ಡಾಯ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಆದರೆ, ಜನ ನಿರ್ಲಕ್ಷ್ಯ ಮಾಡದೇ ಸಮಯಕ್ಕೆ ಸರಿಯಾಗಿ ಎರಡನೇ ಹಾಗೂ ಮೂರನೇ ಡೋಸ್(ಬೂಸ್ಟರ್) ಲಸಿಕೆ ಹಾಕಿಸಿಕೊಳ್ಳಿ. ಕೋವಿಡ್ ನಿಯಮ ಪಾಲಿಸಿ ಎಂದರು. ಜೊತೆಗೆ ಕೋವಿಡ್ ಬೇರೆ ದೇಶದಲ್ಲಿ ಇದೆ, ನಮ್ಮಲ್ಲಿ ಇಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿದರು.

ನಾಲ್ಕನೇ ಅಲೆಯಿಂದ ತಪ್ಪಿಸಿಕೊಳ್ಳಲು ಮತ್ತು ಯಾವುದೇ ತೊಂದರೆಯಾಗಬಾರದು ಎಂದರೆ ಕಡ್ಡಾಯವಾಗಿ‌ ಲಸಿಕೆ ಹಾಕಿಸಿಕೊಳ್ಳಿ ಹಾಗೂ ಅಗತ್ಯ ಇರುವ ಕಡೆ, ಜನಜಂಗುಳಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸಿಕೊಳ್ಳಿ ಎಂದರು. ಸದ್ಯ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯವಾದ ವ್ಯವಸ್ಥೆಯನ್ನು ಮಾಡುತ್ತಿದೆ. ಸದ್ಯದಲ್ಲೇ 5-11 ವರ್ಷದ ಮಕ್ಕಳಿಗೂ ಲಸಿಕೆ‌ ನೀಡಲಾಗುವುದು ಎಂದು ತಿಳಿಸಿದರು.

Leave A Reply

Your email address will not be published.