ಮಂಗಳೂರು : BMW ಕಾರು ಅಪಘಾತ ಪ್ರಕರಣ | ತೀವ್ರವಾಗಿ ಗಾಯಗೊಂಡ ಮಹಿಳೆಯ ಮೆದುಳು ನಿಷ್ಕ್ರಿಯ| ಅಂಗಾಂಗ ದಾನಕ್ಕೆ ಕುಟುಂಬದವರ ನಿರ್ಧಾರ!

ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆ ಮಾಡಿದ ಬಿಎಂಡಬ್ಲ್ಯೂ ಕಾರು ಚಾಲಕ, ರಸ್ತೆ ವಿಭಜಕದ ಮೇಲೆ ಹಾರಿ, ರಸ್ತೆಯ ಇನ್ನೊಂದು ಭಾಗದಲ್ಲಿನ ಸ್ಕೂಟಿಯಲ್ಲಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಪ್ರೀತಿ ಮನೋಜ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಈ ಹಿನ್ನಲೆಯಲ್ಲಿ ಅವರ ಕುಟುಂಬಸ್ಥರು ಅಂಗಾಗ ದಾನ ಮಾಡುವ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಈ ಭೀಕರ ಅಪಘಾತ ಘಟನೆಯಲ್ಲಿ ಪಾದಾಚಾರಿ ಮಹಿಳೆ ಮತ್ತು ಮತ್ತೊಂದು ಕಾರಿನಲ್ಲಿದ್ದ ಏಳು ವರ್ಷದ ಮಗುವಿಗೂ ಕೂಡ ಗಾಯವಾಗಿತ್ತು.

ಏ.9 ರ ಶನಿವಾರದಂದು ಮಧ್ಯಾಹ್ನ 1.20ರ ಸುಮಾರಿಗೆ ಬಲ್ಲಾಳ್ ಭಾಗ್ ಜಂಕ್ಷನ್‌ನಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಈ ಅಪಘಾತದಲ್ಲಿ ಎರಡು ಕಾರುಗಳ ಮಧ್ಯೆ ಸಿಲುಕಿದ ಸ್ಕೂಟರ್ ನಲ್ಲಿದ್ದ ಮಹಿಳೆ 47ರ ಹರೆಯದ ಪ್ರೀತಿ ಮನೋಜ್ ಎಂಬುವವರು ಗಂಭೀರ ಗಾಯಗೊಂಡಿದ್ದರು. ಅವರನ್ನು ಮಂಗಳೂರು ನಗರ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆಯಲ್ಲಿ ಪ್ರೀತಿ ಅವರ ‘ಅಂಗಾಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಕಾರು ಚಾಲಕನನ್ನು ಮಣ್ಣಗುಡ್ಡದ ಉದ್ಯಮಿ ಶ್ರವಣ್ ಕುಮಾರ್ ಪೊಲೀಸರು ವಶಕ್ಕೆ ಪಡೆದಿದ್ದರು.

Leave A Reply

Your email address will not be published.