ಉಡುಪಿ : ನಾಳೆ ಪರೀಕ್ಷೆಗೆ ಮತ್ತೆ ಹಿಜಾಬ್ ಧರಿಸಿ ಬಂದು ನಾಟಕ ಮಾಡಿದರೆ ಕ್ರಿಮಿನಲ್ ಕೇಸ್ – ರಘುಪತಿ ಭಟ್ ಎಚ್ಚರಿಕೆ

ಉಡುಪಿ: ನಾಳಿನ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದು ನಾಟಕ ಮಾಡಿದರೆ ತಕ್ಷಣ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇಲ್ಲದಿದ್ದರೆ ನಾವೇ ನ್ಯಾಯಾಂಗ ನಿಂದನೆ ಕೇಸು ದಾಖಲಿಸುತ್ತೇವೆ. ಇವರೇನು ಅನ್ನ ತಿನ್ನಲ್ವ ಎಂದು ಉಡುಪಿ ಶಾಸಕ ರಘುಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ಧರಿಸಿದ ಇಬ್ಬರು ವಿದ್ಯಾರ್ಥಿನಿಯರು ಇಂದು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯದೇ ಹಿಂತಿರುಗಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಷಡ್ಯಂತ್ರ. ನಿನ್ನೆ ಸಂಜೆಯವರೆಗೆ ಅವರಿಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಿದ್ದೆವು. ಇಂದು ಬೆಳಗಿನವರೆಗೂ ಹಾಲ್ ಟಿಕೆಟ್ ಪಡೆಯಲು ಬರಲಿಲ್ಲ. ನಂತರ ಬೆಳಿಗ್ಗೆ ಒಂಬತ್ತು ಮೂವತ್ತಕ್ಕೆ ಕಾಲೇಜಿಗೆ ಬಂದಿದ್ದಾರೆ. ಈ ವೇಳೆ ಹಿಜಾಬ್ ತೆಗೆದಿಟ್ಟು ಹೋದರೆ ಮಾತ್ರ ಹಾಲ್ ಟಿಕೆಟ್ ಕೊಡುವುದಾಗಿ ಪ್ರಾಂಶುಪಾಲರು ಹೇಳಿದಾಗ, ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡೆದುಕೊಂಡು ಹೋಗಿದ್ದಾರೆ. ನಂತರ
ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಹೇಳಿದ್ದೇನೆ ಎಂದು ಅವರು ಹೇಳಿದ್ದರು.

ಇವರಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ನನಗೆ ಅನೇಕ ಪೋಷಕರು ಕರೆ ಮಾಡಿದ್ದಾರೆ. ಯಾಕೆ ವಿದ್ಯಾರ್ಥಿನಿಯರಿಗೆ ಕಡಿವಾಣ ಹಾಕುವುದಿಲ್ಲ ಎಂದು ಕೇಳುತ್ತಿದ್ದಾರೆ. ಈವೆರೆಗೆ ಸಂಘಟನೆಯ ಕೈವಾಡ ಎಂದು ಹೇಳುತ್ತಿದ್ದೆವು.

ಈ ಮಕ್ಕಳು, ಇವರ ಪೋಷಕರು ಅನ್ನ ತಿನ್ನುವುದಿಲ್ಲವಾ. ಈವರೆಗೂ ಹೆಣ್ಣು ಮಕ್ಕಳು ಮುಗ್ಧರು ಎಂದು ಭಾವಿಸಿದ್ದೆ. ಇವರು ಹಿಜಾಬ್ ಹೈಕೋರ್ಟ್ ಅರ್ಜಿದಾರರು. ನಾಳೆ ಭಯೋತ್ಪಾದಕರಾಗಿ, ಅಥವಾ ಗನ್ ಕೊಟ್ಟರೆ ಗನ್ ಹಿಡ್ಕೋತ್ತಾರ ? ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

Leave A Reply

Your email address will not be published.