ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವು!!

ರಥೋತ್ಸವದ ವೇಳೆ ಬಾಳೆಹಣ್ಣಿನ ಸಿಪ್ಪೆಗೆ ಕಾಲಿಟ್ಟು ಜಾರಿ ಬಿದ್ದು,ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.

ದಾವಣಗೆರೆಯ ಮಹೇಂದ್ರ ಶೋ ರೂಂ ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ ಬಿ.(42) ಎಂಬುವವರು ಸಾವನ್ನಪ್ಪಿದ ಭಕ್ತ ಎಂದು ಗುರುತಿಸಲಾಗಿದೆ.

ಸುರೇಶ ಅವರು ಕುಟುಂಬ ಸಮೇತರಾಗಿ ನಾರದಮುನಿ ರಥೋತ್ಸವಕ್ಕೆ ತಾಲೂಕಿನ ಚಿಗಟೇರಿ ಗ್ರಾಮಕ್ಕೆ ಬೆಳಿಗ್ಗೆ 11 ಗಂಟೆಗೆ ಬಂದಿದ್ದರು.ಗ್ರಾಮದ ಹೊಂಡದ ಬಳಿ ಪತ್ನಿಯನ್ನು ಬಿಟ್ಟು ತಂದೆ ಹಾಗೂ ಮಗ ರಥದ ಬಳಿ ಆಗಮಿಸಿದ್ದಾರೆ. ಸಂಜೆ 4.30ಕ್ಕೆ ರಥ ಎಳೆದಾಗ ಕೇವಲ 5-6 ಅಡಿ ರಥ ಚಲಿಸಿದಾಗ ಬಾಳೆ ಹಣ್ಣಿನ ಸಿಪ್ಪೆ ತುಳಿದು ಜಾರಿ ಬಿದ್ದ ಸುರೇಶ ರಥದ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ತಂದೆಯ ಜೊತೆ ಮಗನು ಸಹ ಕೆಳಕ್ಕೆ ಬಿದ್ದಾಗ ತಕ್ಷಣ ಪೋಲೀಸರು ಹಾಗೂ ಜನರು ಮಗನನ್ನು ಮೇಲಕ್ಕೆತ್ತಿದ್ದು, ಮಗ ಪ್ರಾಣಪಾಯದಿಂದ ಪಾರಾಗಿದ್ದಾನೆ. ಮೃತರ ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದು,ಈ ಸಂಬಂಧ ಚಿಗಟೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.