ಮಂಗಳೂರು : ದರ್ಗಾ ಕೆಡವಿದಾಗ, ದೇವಸ್ಥಾನದ ಗುಡಿ ಪತ್ತೆ!!!

ಮಂಗಳೂರು: ನವೀಕರಣ ಮಾಡುವುದಕ್ಕಾಗಿ ದರ್ಗಾವೊಂದನ್ನು ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನದ ಗುಡಿಯೊಂದು ಪತ್ತೆಯಾಗಿದೆ. ಈ ಘಟನೆ ಕಂಡುಬಂದಿರುವುದು ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ.

ಗುಡಿ ಪತ್ತೆಯಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಮಂಗಳೂರು ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದು, ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರ್ ಮುಂದಾಗಿದ್ದಾರೆ.

ಸದ್ಯ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಸೂಚನೆ ನೀಡಿದ್ದು, ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಿರ್ಧಾರಕ್ಕೆ ದರ್ಗಾ ಆಡಳಿತ ಸಮ್ಮತಿ ಸೂಚಿಸಿದೆ.

ಇತ್ತೀಚೆಗೆ ಮಳಲಿ ದರ್ಗಾದ ನವೀಕರಣದ ಸಲುವಾಗಿ ಅದನ್ನು ತೆಗೆಯಲಾಗಿದ್ದು, ಈ ವೇಳೆ ಈ ಗುಡಿ ಪತ್ತೆಯಾಗಿದೆ. ಇದುವರೆಗೂ ಹಿಂದೂಗಳಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಆದರೆ ಹಳೆಯ ದರ್ಗಾ ಕೆಡವಿದಾಗ ಅದರ ಹಿಂದೆ ಅನೇಕ ವರ್ಷಗಳಿಂದ ನಿಗೂಢವಾಗಿ ಉಳಿದಿದ್ದ ಗುಡಿ ಪತ್ತೆಯಾಗಿದೆ. ಕಳಷ, ತೋಮರ, ಕಂಬಗಳು ಇರುವ ದೇಗುಲ ಇದಾಗಿದ್ದು, ಇದರೊಳಗಡೆ ಯಾವ ದೇವರ ಮೂರ್ತಿ ಇದೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

ಆದರೆ ಮಸೀದಿಯವರು ದೇವಸ್ಥಾನಕ್ಕೆ ಹಾನಿ ಮಾಡದೆ ಸೌಹಾರ್ದತೆ ಮರೆದಿದ್ದಾರೆ.ಮಳಲಿ ಅಬ್ಬಕ್ಕನ ಊರಾಗಿದ್ದು, ಇಲ್ಲಿ ಅನೇಕ ಜೈನ ಹಾಗೂ ಹಿಂದೂಗಳ ದೇವರ ಕುರುಹುಗಳು ಪತ್ತೆಯಾಗಿದೆ.

ಇದಕ್ಕೆ ಮಳಲಿ ದೇವರಗುಡ್ಡೆಯೂ ಒಂದು. ಅದೇ ರೀತಿ ಮಳಲಿಯ ಕುರ್ವೆಮಾರ್ ಫಲ್ಗುಣಿ ಸಮೀಪವೂ ಶಿವಲಿಂಗ ಹಾಗೂ ಪಾಣಿಪೀಠ ಪತ್ತೆಯಾಗಿದೆ. ಆದರೆ ಇದರ ದೇವಸ್ಥಾನ ಎಲ್ಲಿತ್ತು ಎಂದು ತಿಳಿದುಬಂದಿಲ್ಲ.

ಪೊಳಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ದೇವಸ್ಥಾನ ಇದಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಅದರ ಪಕ್ಕ ಮಸೀದಿ ಹೇಗೆ ನಿರ್ಮಾಣವಾಯಿತು,

ಇಲ್ಲಿಗೆ ಟಿಪ್ಪು ಸುಲ್ತಾನ್ ಬಂದಿದ್ದನೇ ಎಂದು ಐತಿಹಾಸಿಕ ಅಧ್ಯಯನಗಳ ಮೂಲಕ ತಿಳಿದುಬರಬೇಕಿದೆ. ಕೆಲವೊಂದು ಮೂಲಗಳ ಪ್ರಕಾರ ಮಳಲಿಯಲ್ಲಿ ಟಿಪ್ಪುವಿನ ಟಂಕಸಾಲೆಯೂ ಇದ್ದಿರಬಹುದೆಂದು ಇತಿಹಾಸ ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.