ಪ್ರಿಯಕರ ಕರೆ ಸ್ವೀಕರಿಸಿಲ್ಲವೆಂದು ಮನನೊಂದು ಯುವತಿ ಆತ್ಮಹತ್ಯೆ

ಉಡುಪಿ : ತಾನು ಪ್ರೀತಿಸುತ್ತಿದ್ದ ಯುವಕ ಕರೆ ಸ್ವೀಕರಿಸಲಿಲ್ಲವೆಂಬ ಕಾರಣಕ್ಕಾಗಿ ಮನನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ. 17ರಂದು ಜಿಲ್ಲೆಯ ಹೆಬ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಳ್ತೂರು ಗ್ರಾಮದಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕು ಇಡುಕಿಣಿ ಗ್ರಾಮದ ಕುಸುಮಾ (19) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿ.

ಬ್ರಹ್ಮಾವರ ತಾಲೂಕು ಕಳ್ತೂರು ಗ್ರಾಮದ ಸಂತೆಕಟ್ಟೆ ಮೋಹನ್‌ ಕಾಮತ್‌ ಎಂಬವರಲ್ಲಿ ಹೋಂ ನರ್ಸಿಂಗ್‌ ಕೆಲಸ ಮಾಡಿಕೊಂಡಿದ್ದ ಕುಸುಮಾ ಚಿಕ್ಕಮಗಳೂರು ನಿವಾಸಿ ರಾಹುಲ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು.

ಆತನು ಪೋನ್ ಕರೆ ಸ್ವೀಕರಿಸದ ಕಾರಣ ಹಾಗೂ ಇನ್ನು ಮುಂದೆ ಆತನು ತನಗೆ ಸಿಗಲ್ಲ ಎಂಬ ಬೇಸರದಿಂದ ಕುಸುಮಾ ಎ. 11 ರಂದು ಇಲಿ ಪಾಷಾಣ ಸೇವಿಸಿದ್ದಳು.

ಅಸ್ವಸ್ಥಗೊಂಡ ಆಕೆಯನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಎ.17 ರಂದು ಮೃತಪಟ್ಟಿದ್ದಾಳೆ.

ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.