ಮರ್ಯಾದಾ ಹತ್ಯಾ ! ಮಗಳ ಲೈಫಲ್ಲಿ ತಂದೆಯೇ ವಿಲನ್; 10 ಲಕ್ಷ ಸುಪಾರಿ ನೀಡಿ ಅಳಿಯನ ಕೊಲೆ ಮಾಡಿಸಿದ ಅಪ್ಪ!!!

ಮದುವೆ ವಿಷಯದಲ್ಲಿ ಯಾರೇ ಎಷ್ಟೇ ಪ್ರಬುದ್ಧರಾಗಿದ್ದರೂ ಜಾತಿ ವಿಷಯದಲ್ಲಿ ಮಾತ್ರ ತಮ್ಮ ಕ್ರೌರ್ಯ ತೋರಿಸುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಅಂಥದ್ದೇ ಒಂದು ಘಟನೆಯಲ್ಲಿ ತಂದೆಯೋರ್ವ ತಾನೇ ಹೆತ್ತು ಸಾಕಿದ ಮಗಳು ತಮ್ಮ ಜಾತಿಯಲ್ಲದ ಹುಡುಗನನ್ನು ಪ್ರೀತಿಸಿ, ಮದುವೆಯಾದಳೆಂದು ಸುಪಾರಿ ನೀಡಿ ಅಳಿಯನನ್ನು ಕೊಲೆ ಮಾಡಿಸಿದ್ದಾರೆ.

ಈ ಘಟನೆ ನಡೆದಿರುವುದು ಯಾದಾದ್ರಿ ಭುವನಗಿರಿ ನಗರದಲ್ಲಿ. ಈ ಮರ್ಯಾದ ಹತ್ಯೆ ತೀವ್ರ ಸಂಚಲನ ಮೂಡಿಸಿದೆ. ರಾಮಕೃಷ್ಣ ಮತ್ತು ಭಾರ್ಗವಿ ಮದುವೆಯೇ ಈ ಮರ್ಯಾದಾ ಹತ್ಯೆಯ ಘಟನೆಗೆ ಕಾರಣ.

ಎರುಕುಲ ರಾಮಕೃಷ್ಣ (32) ಎಂಬಾತನ ಶವ ದೇವಸ್ಥಾನದ ಬಳಿ ನಿರ್ಮಾಣ ಹಂತದಲ್ಲಿರುವ ರೈಲು ಮಾರ್ಗದ ಬಳಿ ಮೃತದೇಹ ಪತ್ತೆಯಾಗಿದೆ. ತನ್ನ ಮಗಳನ್ನು ಪ್ರೇಮ ವಿವಾಹವಾಗಿದ್ದಕ್ಕೆ ರಾಮಕೃಷ್ಣನನ್ನು ಆಕೆಯ ಚಿಕ್ಕಪ್ಪ ವೆಂಕಟೇಶ್ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಪತ್ನಿ ಭಾರ್ಗವಿ ನೀಡಿದ ದೂರಿನ ಮೇರೆಗೆ ಅಮೃತಯ್ಯ ಎಂಬಾತನನ್ನು ವಿಚಾರಣೆಗೆ ಸಂಪೂರ್ಣ ಸತ್ಯ ಬೆಳಕಿಗೆ ಬಂದಿದೆ.

ಭುವನಗಿರಿ ಜಿಲ್ಲೆಯ ವಾಲಿಗೊಂಡ ಮಂಡಲದ ಲಿಂಗರಾಜುಪಲ್ಲಿಯ ನಿವಾಸಿ ಎರುಕುಲ ರಾಮಕೃಷ್ಣ 10 ವರ್ಷಗಳ ಹಿಂದೆ ಗೃಹರಕ್ಷಕನಾಗಿ ಕೆಲಸಕ್ಕೆ ಸೇರಿದ್ದು, ನಂತರ ಯಾದಗಿರಿಗುಟ್ಟ ಠಾಣೆಗೆ ವರ್ಗಾವಣೆಗೊಂಡಿದ್ದ. ರಾಮಕೃಷ್ಣ ಮನೆಯ ಪಕ್ಕದಲ್ಲೇ ವಾಸವಾಗಿರುವ ವೆಂಕಟೇಶ್ ಎಂಬುವರ ಮಗಳು ಭಾರ್ಗವಿ ಜತೆಗಿನ ಪರಿಚಯ ಬಳಿಕ ಪ್ರೇಮವಾಗಿ ಬದಲಾಗಿತ್ತು.

ಎರಡು ವರ್ಷಗಳ ಹಿಂದೆ ಇಬ್ಬರು ಲವ್ ಮ್ಯಾರೇಜ್ ಆಗಿದ್ದರು. 10 ತಿಂಗಳ ಹಿಂದೆ ಭುವನಗಿರಿಗೆ ಬಂದು ವಾಸವಾಗಿದ್ದ ದಂಪತಿಗೆ ಆರು ತಿಂಗಳ ಹಿಂದೆ ಹೆಣ್ಣು ಮಗು ಕೂಡಾ ಇದೆ. ಮಗಳ ಪ್ರೇಮ ವಿವಾಹ ಇಷ್ಟವಾಗದ ವೆಂಕಟೇಶ್ ತನ್ನ ಅಳಿಯನ ಮೇಲೆ ಕೋಪ ಬೆಳೆಸಿಕೊಂಡಿದ್ದರು. ಮದುವೆಯಾದ ಬೆನ್ನಲ್ಲೇ ರಾಮಕೃಷ್ಣನ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಆದ್ರೆ ಇತ್ತೀಚೆಗಷ್ಟೇ ತನ್ನ ಆಸ್ತಿಯಲ್ಲಿ ಪಾಲು ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಮಗಳು ಹೇಳಿದ್ದಕ್ಕೆ ಅಳಿಯನನ್ನು ಕೊಲೆ ಮಾಡಿಸಿದ್ದಾರೆ ಎಂದು ಪೊಲೀಸರ ತನಿಖೆ ಮೂಲಕ ತಿಳಿದುಬಂದಿದೆ.

ರಾಮಕೃಷ್ಣ ಮತ್ತು ಭಾರ್ಗವಿ ಆಗಸ್ಟ್ 2020ರಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ಈ ದಂಪತಿ ಕೆಲವು ತಿಂಗಳುಗಳ ಕಾಲ ಸ್ವಗ್ರಾಮ ಲಿಂಗರಾಜುಪಲ್ಲಿ ಮತ್ತು ಕೊನ್ನಾಲು ನಲ್ಗೊಂಡದಲ್ಲಿ ವಾಸಿಸುತ್ತಿದ್ದರು. ಆ ವೇಳೆ ಭಾರ್ಗವಿಯನ್ನು ಆಕೆಯ ತಂದೆ ವೆಂಕಟೇಶ್ ಎರಡು ಬಾರಿ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿದ್ದರು. ರಾಮಕೃಷ್ಣನನ್ನು ಬಿಟ್ಟು ಬರುವಂತೆ ಆಕೆಯ ತಂದೆ ಒತ್ತಾಯಿಸಿದ್ದರೂ, ತಂದೆಯ ಮಾತನ್ನು ಕೇಳದೆ ಮತ್ತೆ ಗಂಡನೊಂದಿಗೆ ಜೀವನ ಸಾಗಿಸುತ್ತಿದ್ದರು. 10 ತಿಂಗಳಿಂದ ಪತ್ನಿ ಮತ್ತು ಮಗುವಿನೊಂದಿಗೆ ಭುವನಗಿರಿಯ ಟಾಟಾನಗರದಲ್ಲಿ ನೆಲೆಸಿರುವ ರಾಮಕೃಷ್ಣ ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದ್ದ.

ಎ. 15ರಂದು ಅಮೃತಯ್ಯ ಎಂಬುವವರ ಜೊತೆ ರಾಮಕೃಷ್ಣ ಮನೆಯಿಂದ ಹೊರ ಹೋಗಿದ್ದ. ಆದರೆ ದಿನಪೂರ್ತಿ ಕಳೆದ್ರೂ ಪತಿ ಮನೆಗೆ ಬಾರದ ಕಾರಣ ಗಾಬರಿಗೊಂಡ ಭಾರ್ಗವಿ ಎ.16ರಂದು ಪಟ್ಟಣ ಠಾಣೆಗೆ ದೂರು ನೀಡಿದ್ದಳು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಅಮೃತಯ್ಯನನ್ನು ವಿಚಾರಣೆ ನಡೆಸಿದಾಗ ಸಿದ್ದಿಪೇಟೆಗೆ ಸೇರಿದ್ದ ಲತೀಫ್ ಗ್ಯಾಂಗ್ ರಾಮಕೃಷ್ಣನನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಾಮಕೃಷ್ಣ ಹತ್ಯೆ ಮಾಡುವುದಕ್ಕೆ 10 ಲಕ್ಷ ರೂಪಾಯಿ ನೀಡುವುದಾಗಿ ಮಾವ ವೆಂಕಟೇಶ್ ಲತೀಫ್ ಗ್ಯಾಂಗ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಅಡ್ವಾನ್ಸ್ ಆಗಿ 6 ಲಕ್ಷ ರೂಪಾಯಿ ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಮಕೃಷ್ಣ ಹತ್ಯೆಯ ಸುದ್ದಿ ತಿಳಿದ ಪತ್ನಿ ಭಾರ್ಗವಿ, ತಾಯಿ ಕಾಳಮ್ಮ ಹಾಗೂ ಕುಟುಂಬಸ್ಥರು ರೋದನೆ ಮುಗಿಲು ಮುಟ್ಟಿದೆ. ‘ನನ್ನ ತಂದೆ ಇಂತಹ ಘೋರ ಅಪರಾಧ ಮಾಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ನನಗೆ ಹಾಗೂ ನನ್ನ ಆರು ತಿಂಗಳ ಮಗುವಿಗೆ ಘೋರ ಅನ್ಯಾಯ ಮಾಡಿದ್ದಾರೆ ಎಂದು ಭಾರ್ಗವಿ ಅಳಲು ತೋಡಿಕೊಂಡಿದ್ದಾರೆ.

Leave A Reply

Your email address will not be published.