ಮಠಕ್ಕೆ ನೀಡುವ ಅನುದಾನದಲ್ಲಿ ಕಮೀಷನ್ ದಿಂಗಾಲೇಶ್ವರ ಶ್ರೀಗಳ ಆರೋಪಕ್ಕೆ ವಜ್ರದೇಹಿ ಶ್ರೀ ತಿರುಗೇಟು | ಗಾಳಿಯಲ್ಲಿ ಗುಂಡು ಹಾರಿಸೋದು ಬೇಡ ದಾಖಲೆ ನೀಡಿ

ಮಂಗಳೂರು :ಸರಕಾರವು ಮಠಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲಿಯೂ ಕೂಡ ಕಮಿಷನ್ ಹೋಗುತ್ತದೆ ಎಂಬ ದಿಂಗಾಲೇಶ್ವರ ಶ್ರೀಗಳು ಮಾಡಿರುವ ಆರೋಪಕ್ಕೆ ಗುರುಪುರ ವಜ್ರದೇಹಿ ಶ್ರೀಗಳು ತಿರುಗೇಟು ನೀಡಿದ್ದಾರೆ.

ಮಠಮಾನ್ಯಗಳಿಂದಲೂ ಕಮಿಷನ್ ಪಡೆಯಲಾಗುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿಯವರು ಆರೋಪ ಮಾಡಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಜ್ರದೇಹಿ ಶ್ರೀರಾಜಶೇಖರಾನಂದ ಸ್ವಾಮೀಜಿವರು,ದಿಂಗಾಲೇಶ್ವರ ಶ್ರೀಗಳ ಆರೋಪ ಅಪ್ಪಟ ಸುಳ್ಳು,ನಾನು ಖಡಾಖಂಡಿತವಾಗಿ ಹೇಳುತ್ತೇನೆ. ನಮ್ಮ ಮಠಕ್ಕೂ ಸರಕಾರದಿಂದ ರೂ.50 ಲಕ್ಷ ಅನುದಾನ ಬಂದಿದೆ. ನಾವ್ಯಾರೂ ಒಂದು ರೂಪಾಯಿ ಕಮೀಷನ್ ನೀಡಿಲ್ಲ. ಯಾವುದೇ ಹಂತದಲ್ಲೂ ಸರ್ಕಾರದ ಅಧಿಕಾರಿಗಳಿಗೆ ಕಮಿಷನ್ ಕೊಟ್ಟಿಲ್ಲ ಇಂತಹ ಸುಳ್ಳು ಸಂದೇಶ ಹಬ್ಬಿಸಬಾರದು. ಎಲ್ಲೋ ಆದ ಘಟನೆ ನಮ್ಮಲ್ಲೂ ಆಗಿದೆ ಎನ್ನುವುದು ಸರಿಯಲ್ಲ.

ನನಗೆ ಗೊತ್ತಿರುವ ಯಾವುದೇ ಶ್ರೀಗಳು ಒಂದು ನಯಾಪೈಸೆ ಕಮಿಷನ್ ಕೊಟ್ಟಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ ದಾಖಲೆ ಕೊಡಿ ಎಂದು ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸವಾಲು ಹಾಕಿದ್ದಾರೆ.

Leave A Reply

Your email address will not be published.