ಸಚಿವೆಯ ಮೆರವಣಿಗೆಯ ಆಡಂಬರದಿಂದ ಪ್ರಾಣವನ್ನೇ ಕಳೆದುಕೊಂಡ ಪುಟ್ಟ ಕೂಸು!!

ದೊಡ್ಡ-ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗಳ ಸಂಭ್ರಮಾಚಾರಣೆಗೆ ಅದೆಷ್ಟೋ ಜೀವಗಳು ಬಲಿಯಾಗುತ್ತಲೇ ಇದೆ.ಅಧಿಕಾರಿಗಳಿಗೆ ಒಂದು ನಿಯಮವಾದರೆ ಸಾಮಾನ್ಯ ಜನತೆಗೆ ಇನ್ನೊಂದು ರೂಲ್ಸ್ ಎಂಬಂತಾಗಿದೆ. ಇದೇ ರೀತಿ ಇಲ್ಲೊಂದು ಕಡೆ ಸಚಿವೆಯೊಬ್ಬರ ಮೆರವಣಿಗೆಯ ಆಡಂಬರದಿಂದ ಒಂದು ಪುಟ್ಟ ಮಗುವಿನ ಪ್ರಾಣವೇ ಹೋಗಿದೆ.

ಹೌದು.ಸಚಿವರೊಬ್ಬರ ಮೆರವಣಿಗೆಯಿಂದಾಗಿ ಟ್ರ್ಯಾಫಿಕ್‌ ಜಾಮ್‌ ಉಂಟಾದ್ದರಿಂದ, ಅನಾರೋಗ್ಯದಿಂದ ಬಳಲುತ್ತಿದ್ದ 8 ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೇ ದಾರಿ ಮಧ್ಯೆಯೇ ಸಾವನ್ನಪ್ಪಿರುವ ಘಟನೆ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗದಲ್ಲಿ ನಡೆದಿದೆ.

ಘಟನೆಯ ವಿವರ:

ಶೆಟ್ಟೂರು ವಲಯದ ಚೆರ್ಲೋಪಲ್ಲಿಯ ಗಣೇಶ್-ಇರಕ್ಕ ದಂಪತಿಗೆ 8 ತಿಂಗಳ ಹಿಂದೆ ಮಗು ಜನಿಸಿತ್ತು. ನಿನ್ನೆ ಸಂಜೆ ಮಗು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿತ್ತು. ಹೀಗಾಗಿ ಅವರು ಆಟೋದಲ್ಲಿ ಕಲ್ಯಾಣದುರ್ಗಕ್ಕೆ ಹೊರಟಿದ್ದರು.ಇದೇ ವೇಳೆ ಸಚಿವ ಸಂಪುಟದ ಉಸ್ತುವಾರಿ ಹೊತ್ತಿದ್ದ ಸ್ಥಳೀಯ ಶಾಸಕಿ ಉಷಾ ಶ್ರೀಚರಣ್ ಅವರು ಪಟ್ಟಣಕ್ಕೆ ಬರುತ್ತಿದ್ದಂತೆ ಬೃಹತ್ ಸಮಾವೇಶ ಆಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸಂಚಾರ ಸ್ಥಗಿತಗೊಳಿಸಿದರು. ಈ ವೇಳೆ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೂ ಸರಿಯಾದ ಸಮಯಕ್ಕೆ ಸ್ಪಂದಿಸಲಿಲ್ಲ. ಮಗುವನ್ನು ಹೊತ್ತೊಯ್ಯುತ್ತಿದ್ದ ಕಾರು ನಗರದ ಮಧ್ಯದಲ್ಲಿ ಸಿಲುಕಿಕೊಂಡಿದ್ದು,ಎಷ್ಟೊತ್ತಾದರೂ ಜನರು ಅಲ್ಲಿಂದ ಚದುರದ ಪರಿಣಾಮ, ಪರಿಚಯಸ್ಥರೊಬ್ಬರು ಮಗುವನ್ನು ಬೈಕ್‌ನಲ್ಲಿ ಕರೆದುಕೊಂಡು ಹೋದರು. ಆದರೆ ಆಸ್ಪತ್ರಗೆ ಹೋಗುವುದು ತಡವಾದ್ದರಿಂದ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದೀಗ ಮಗುವಿನ ಸಾವಿಗೆ ಪೋಲಿಸರ ಬೇಜವಾಬ್ದಾರಿಯೇ ಕಾರಣ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.ಆದರೆ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು ತಾವು ವಿರೋಧಿಸಲಿಲ್ಲ ಎಂಬ ವಿವರಣೆಯನ್ನು ನೀಡಿದ್ದಾರೆ. ಮಗು ಅನಾರೋಗ್ಯದಿಂದ ಬಳಲುತ್ತಿದೆ ಎಂದು ತಿಳಿದ ತಕ್ಷಣ ಅವರನ್ನು ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

1 Comment
  1. ಲತೀಫ್ ಇಂಡಿಯನ್ says

    Ministers are not gods. Protocol can’t be followed during emergency.

Leave A Reply

Your email address will not be published.