ಪುತ್ತೂರು: ಮಳೆರಾಯನ ಅಬ್ಬರಕ್ಕೆ ಬೆಚ್ಚಿದ ಜನ!!ಜಾತ್ರೆಯ ಪ್ರಯುಕ್ತ ವ್ಯಾಪಾರಕ್ಕೆ ಹಾಕಿದ್ದ ಅಂಗಡಿ ಮುಂಗಟ್ಟುಗಳಿಗೆ ಹಾನಿ!!

ಪುತ್ತೂರು: ಏಪ್ರಿಲ್ 13ರ ಸಂಜೆ ಸುರಿದ ಭೀಕರ ಗಾಳಿ ಮಳೆ ಜಿಲ್ಲೆಯಾದ್ಯಂತ ಕೆಲ ಅವಘಡಗಳಿಗೆ ಕಾರಣವಾಗಿದೆ.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರೆ ನಡೆಯುತ್ತಿದ್ದು, ನಿನ್ನೆ ಸುರಿದ ಭಾರೀ ಮಳೆಗೆ ದೇವಾಲಯದ ಕೆಲ ಕಾರ್ಯಗಳಿಗೂ ಅಡ್ಡಿಯಾಗಿದ್ದು, ತಾಲೂಕಿನ ಹಲವು ಕಡೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಜಾತ್ರೆಯ ಪ್ರಯುಕ್ತ ದೇವಾಲಯದ ಸುತ್ತಲೂ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದ್ದು, ಗಾಳಿ ಮಳೆಯ ಪರಿಣಾಮ ಅಂಗಡಿಗಳ ಶೀಟ್ ಹಾರಿ ಚೆಲ್ಲಾಪಿಲ್ಲಿಯಾಗಿದ್ದು ಮಳೆಯ ಭೀಕರತೆಗೆ ನೆರೆದಿದ್ದವರೆಲ್ಲರೂ ಭಯಭೀತರಾಗಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭೀಕರ ಮಳೆಯಿಂದಾಗಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತ ಸಮೂಹ ತೊಂದರೆ ಅನುಭವಿಸಿದ್ದು, ಗಾಳಿಯ ಭೀಕರತೆಗೆ ಅಂಗಡಿ ಮುಂಗಟ್ಟುಗಳ ಶೀಟ್ ಹಾರಿ ಚೆಲ್ಲಾಪಿಲ್ಲಿಯಾಗಿ ಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದೆಲ್ಲರದ ನಡುವೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಕುರಿತು ಖುಷಿ ವ್ಯಕ್ತಪಡಿಸಿ ಗೇಲಿ ಮಾಡಿದ್ದು,ಅನ್ಯಮತೀಯರ ವ್ಯಾಪಾರಕ್ಕೆ ಅವಕಾಶ ನೀಡದ ಕಾರಣ ಮಹಾದೇವ ಮುನಿದಿದ್ದಾನೆ, ಪರಿಣಾಮ ಘಟನೆ ಸಂಭವಿಸಿದೆ ಎಂದು ಸ್ವಧರ್ಮಿಯರ ಸಹಿತ ಕೆಲವರು ನಾಲಗೆ ಹರಿಯಬಿಟ್ಟಿದ್ದಾರೆ ಎನ್ನುವ ಮಾಹಿತಿ ಹರಿದಾಡಿದೆ.

Leave A Reply

Your email address will not be published.