ಪಾವಂಜೆ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ!

ಹಳೆಯಂಗಡಿ: ಕುಡಿತದ ಚಟ ಹೊಂದಿದ ವ್ಯಕ್ತಿಯೋರ್ವ ಮಾನಸಿಕ ಖಿನ್ನತೆಗೆ ಒಳಗಾಗಿ, ಪಾವಂಜೆ ಸೇತುವೆಯಿಂದ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಹೆಜಮಾಡಿ ನಿವಾಸಿ ಬಾಲಕೃಷ್ಣ ಅಮೀನ್ (41) ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಮುಲ್ಕಿಯಲ್ಲಿ ತನ್ನ ಸಹೋದರನ ಪ್ರಮೋದ್ ಇಲೆಕ್ಟ್ರಾನಿಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಅತಿಯಾದ ಕುಡಿತದ ಚಟ ಹೊಂದಿದ್ದ ಬಾಲಕೃಷ್ಣ ಅಮೀನ್ ಅವರನ್ನು ಮನೆಯವರು ಹಲವೆಡೆ ಮದ್ಯವರ್ಜನ ಶಿಬಿರಗಳಲ್ಲಿ ಸೇರಿಸಿ ಕುಡಿತದಿಂದ ಮುಕ್ತರನ್ನಾಗಿಸಲು ಯತ್ನಿಸಿದ್ದರು. ಆದರೂ ಕುಡಿತದ ಚಟದಿಂದಾಗಿ ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬಾಲಕೃಷ್ಣ ಅವರು ಮಂಗಳವಾರ ಬೆಳಗ್ಗಿನಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಮಂದಿ ನಿನ್ನೆಯಿಂದ ಅವರ ಹುಡುಕಾಟದಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.

ಬುಧವಾರ ಬೆಳಗ್ಗೆ ಪಾವಂಜೆಯ ನಂದಿನಿ ನದಿಯಲ್ಲಿ ಮೃತದೇಹ ತೇಲುತ್ತಿರುವುದನ್ನು ಕಂಡವರು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಮುಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹದ ಗುರುತು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಂದಿನಿ ನದಿಗೆ ಮಂಗಳವಾರ ರಾತ್ರಿಯೇ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.