ಗಂಡನ ಕೊಲೆಗೆ ಸಂಚು ರೂಪಿಸಿದ ಖತರ್ನಾಕ್ ಹೆಂಡತಿ; 19 ರ ಯುವಕನೊಂದಿಗೆ ಕಳ್ಳಾಟ, ಗಂಡನ ಅಡ್ಡಿ!

ಪ್ರಿಯಕರನ ಜತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಕೊಲೆ ಮಾಡಲು ಹೆಂಡತಿಯೊಬ್ಬಳು ಸಂಚು ರೂಪಿಸಿ, ಕೊಲೆ ಮಾಡಿದ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಪ್ರೇಯಸಿ ಹೇಳಿದಂತೆ ಕೊಲೆಗೈದ ಪ್ರಿಯಕರನನ್ನು ತುಮಕೂರು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕರೇಜವನಹಳ್ಳಿ ಗ್ರಾಮದಲ್ಲಿ ಕೊಲೆ ಘಟನೆ ನಡೆದಿತ್ತು. ರಾಜು (34) ಕೊಲೆಯಾದ ವ್ಯಕ್ತಿ. ರಾಕೇಶ್ (19) ಹಾಗೂ ಮೀನಾಕ್ಷಿ (25) ಬಂಧಿತ ಆರೋಪಿಗಳು. ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ.

ಕಳೆದ 8 ವರ್ಷಗಳ ಹಿಂದೆ ಮೀನಾಕ್ಷಿ ಎಂಬಾಕೆಯನ್ನು ರಾಜು ಮದುವೆಯಾಗಿದ್ದ. ದಂಪತಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ. ರಾಜು ಬೆಂಗಳೂರಿನಲ್ಲಿ ಒಂದು ವರ್ಷದಿಂದ ಕೆಲಸ ಮಾಡಿಕೊಂಡಿದ್ದು, ಕಳೆದ ಎರಡು ತಿಂಗಳಿಂದ ಬೆಂಗಳೂರು ಬಿಟ್ಟು ಊರಿಗೆ ಬಂದಿದ್ದ. ಅದೇ ಊರಿನವನಾದ ರಾಕೇಶ್, ತುಮಕೂರಿನ ಖಾಸಗಿ ಕಾಲೇಜೊಂದರಲ್ಲಿ ಐಟಿಐ ಓದಿದ್ದ. ಕಳೆದ ಒಂದು ವರ್ಷದ ಹಿಂದೆ ಮದುವೆ ಕಾರ್ಯಕ್ರಮವೊಂದರಲ್ಲಿ ಮೀನಾಕ್ಷಿಗೆ ಪರಿಚಯವಾಗಿ, ಒಬ್ಬರಿಗೊಬ್ಬರು ಮೊಬೈಲ್ ನಂಬರ್ ಶೇರ್ ಮಾಡಿಕೊಂಡಿದ್ದರು.

ಕೊಲೆಯಾದ ರಾಜು

ಮೀನಾಕ್ಷಿ ಮನೆಯಲ್ಲಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದಳು. ಹೊಲಿಗೆ ನೆಪದಲ್ಲಿ ರಾಕೇಶ್ ಆಗಾಗ ಮೀನಾಕ್ಷಿ ಮನೆಗೆ ಭೇಟಿ ನೀಡುತ್ತಿದ್ದ. ಈ ನಡುವೆ ಇವರಿಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಇದೇ ರೀತಿ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಲವ್ವ ಡವ್ಬಿ ಮುಂದುವರಿದಿತ್ತು. ಯಾವಾಗ ಗಂಡ ರಾಜು ಬೆಂಗಳೂರು ಬಿಟ್ಟು ಮನೆ ಸೇರಿದ್ನೋ ಇವರಿಬ್ಬರ ಅನೈತಿಕ ಸಂಬಂಧಕ್ಕೆ ತಡೆಗೋಡೆ ಬಿದ್ದಂತಾಗಿತ್ತು. ಅಲ್ಲದೇ ರಾಜು ಆಗಾಗ ಕುಡಿದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನಂತೆ.

ಈ ಎಲ್ಲ ವಿಚಾರವನ್ನು ಮೀನಾಕ್ಷಿ, ತನ್ನ ಪ್ರಿಯಕರ ರಾಕೇಶ್ ಜತೆ ಹೇಳಿಕೊಂಡಿದ್ದಳು. ಏನಾದರೂ ಮಾಡಿ ನನ್ನ ಗಂಡನನ್ನ ಮುಗಿಸಿಬಿಡು ಅಂತಾ ಪ್ರಿಯಕರನ ಬಳಿ ಕೇಳಿಕೊಂಡಿದ್ದಳಂತೆ. ಅದರಂತೆಯೇ ಇಬ್ಬರು ಸೇರಿ ಗಂಡನ ಕೊಲೆಗೆ ಪ್ಲಾನ್ ರೂಪಿಸಿ, ಮುಹೂರ್ತ ಇಟ್ಟಿದ್ದಾರೆ. ಕಳೆದ ಶುಕ್ರವಾರ ರಾತ್ರಿ ರಾಜು ಅವರ ಮನೆ ಬಳಿಯ ತೋಟದಲ್ಲಿ ರಾಕೇಶ್ ಹಾಗೂ ರಾಜು ಇಬ್ಬರ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ರಾಜುಗೆ ಮಧ್ಯರಾತ್ರಿಯವರೆಗೆ ಕಂಠಪೂರ್ತಿ ಬಿಯರ್ ಕುಡಿಸಿದ್ದಾನೆ. ಬಳಿಕ ರಾಜು ತಲೆ ಮೇಲೆ ಕಲ್ಲು ಎತ್ತಿಹ ಕಾಸೆಲ್ ರಾಕೇಶ್ ಕೊಲೆ ಮಾಡಿದ್ದಾನೆ.

ಇದಾದ ಬಳಿಕ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ರಾಜು ಬೈಕ್‌ನಲ್ಲಿದ್ದ ಪೆಟ್ರೋಲ್ ತೆಗೆದು, ರಾಜುಗೆ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಮನೆಯ ಹಿಂಭಾಗದ ತೋಟದಲ್ಲಿ ಬೆಂಕಿ ಉರಿಯುತ್ತಿರುವುದನ್ನು ನೋಡಿ ರಾಜು ತಂದೆ ಓಡೋಡಿ ಬಂದು ಬೆಂಕಿ ನಂದಿಸಿದ್ದಾರೆ. ಬಳಿಕ ಪೊಲೀಸ್ ಕಂಟ್ರೋಲ್ ರೂಂಗೆ ಕಾಲ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇತ್ತ ಪತಿಯನ್ನ ಕೊಲೆ ಮಾಡಿಸಿದ ಹೆಂಡತಿ ಮೀನಾಕ್ಷಿ ತನಗೇನು ಗೊತ್ತಿಲ್ಲ ಎಂಬಂತೆ ಕಣ್ಣೀರಿಡುತ್ತಾ ಹೈಡ್ರಾಮ ಮಾಡುತ್ತಿದ್ದಳು. ದೂರು ಕೊಟ್ರೆ ಸಿಕ್ಕಿಬಿಳ್ತಿನಿ ಅನ್ನೋ ಭಯದಲ್ಲಿ ಪೊಲೀಸರಿಗೆ ದೂರು ಕೊಡಲು ಹಿಂದೇಟು ಹಾಕಿದ್ದಾಳೆ. ಆದರೆ, ಪೊಲೀಸ್ ತನಿಖೆಯಲ್ಲಿ ಮೀನಾಕ್ಷಿಯ ಕಳ್ಳಾಟ ಬಯಲಾಗಿದೆ.

ರಾಜು ಕೊಲೆ ಬಳಿಕ ತನಗೆನು ಗೊತ್ತಿಲ್ಲದಂತೆ ರಾಕೇಶ್ ಹಾಗೂ ಮೀನಾಕ್ಷಿ ಸಖತ್ ನಾಟಕ ಮಾಡಿದ್ದಾರೆ. ರಾಜು ಅಂತ್ಯಕ್ರಿಯೆ ಆಗೋವರೆಗೂ ರಾಕೇಶ್, ರಾಜು ಮನೆಯಲ್ಲೇ ಓಡಾಡಿಕೊಂಡಿದ್ದ. ಗಂಡನ ಕೊಲೆ ಸಂಬಂಧ ಪೊಲೀಸರಿಗೆ ದೂರು ಕೊಡುವುದು ಬೇಡ. ಸತ್ತ ನನ್ನ ಗಂಡ ವಾಪಸ್ ಬರಲ್ಲ. ನನ್ನ ಗಂಡನೇ ಕುಡಿದು ಬೆಂಕಿ ಹಾಕಿಕೊಂಡಿದ್ದಾನೆ ಅಂತ ಕಟ್ಟುಕತೆ ಕಟ್ಟಿದ್ದಳು. ಈ ವೇಳೆ ಪೊಲೀಸರು ರಾಜು ತಂದೆ ಕಡೆಯಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಪತ್ನಿಯ ಕಳ್ಳಾಟ ಬಯಲಾಗಿದೆ. ಆರೋಪಿ ರಾಕೇಶ್ ಹಾಗೂ ಮೀನಾಕ್ಷಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

Leave A Reply

Your email address will not be published.