ಭಾರತೀಯರು ಪವರ್ ಕಟ್ ಸಮಸ್ಯೆಯಿಂದ ಕಂಗಾಲಾಗಿದ್ಧಾರೆ. ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಪವರ್ ಕಟ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಈ ಬಾರಿಯ ಬೇಸಿಗೆಯಲ್ಲಿ ಉಷ್ಣಾಂಶ ದಾಖಲೆ ಮಟ್ಟಕ್ಕೆ ಏರುವ ನಿರೀಕ್ಷೆ ಇದೆ. ಈ ಸುಡುಸುಡು ಬಿಸಿಲಿನಲ್ಲಿ ಜನಸಾಮಾನ್ಯರು ಪವರ್ ಕಟ್ ಬಿಸಿಯನ್ನೂ ಎದುರಿಸಬೇಕಾಗಿದೆ. ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಕೆ ಇಲ್ಲದಿರುವುದು ಮತ್ತು ಕಲ್ಲಿದ್ದಲು ಪೂರೈಕೆಯಲ್ಲಾಗಿರುವ ಸಮಸ್ಯೆ ಪವರ್ ಕಟ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಬೇಸಿಗೆಯ ಆರಂಭದಲ್ಲೇ ಇಷ್ಟು ವ್ಯಾಪಕ ಲೋಡ್ ಶೆಡ್ಡಿಂಗ್ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ವಿಪರೀತವಾಗಲಿದೆ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಬಿಹಾರ, ಜಾರ್ಖಂಡ್, ಪಂಜಾಬ್, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಈಗಾಗಲೇ ಸಾಕಷ್ಟು ಹೊತ್ತು ಲೋಡ್ ಶೆಡ್ಡಿಂಗ್ ನಿರಂತರವಾಗಿ ನಡೆಯುತ್ತಿದೆ.
ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ವಿದ್ಯುತ್ ಸಂಗ್ರಹ ಅಗತ್ಯಕ್ಕೆ ತಕ್ಕಷ್ಟು ಇದೆ. ವಿದ್ಯುತ್ ಇದ್ದರೂ ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ನಡೆಯಲು ಕಾರಣ ಇದೆ. ಇಲ್ಲಿ ಕೆಲವಾರು ತಿಂಗಳುಗಳಿಂದ ಅಂಡರ್ಗ್ರೌಂಡ್ ಕೇಬಲ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ.