ಮುಕ್ಕೂರು : ಉಚಿತ ಬೇಸಗೆ ಶಿಬಿರ | ಏಳು ದಿನಗಳ ಚಿಣ್ಣರ ಸಂಭ್ರಮಕ್ಕೆ ಚಾಲನೆ | ಮಕ್ಕಳ ಸಂಭ್ರಮಕ್ಕೆ ತೋರಣ ಕಟ್ಟಿದ ಶಿಬಿರ

ಮಕ್ಕಳ ಪ್ರತಿಭೆ ಅರಳಲು ಉತ್ತಮ ವೇದಿಕೆ : ಹೇಮಸ್ವಾತಿ ಕುರಿಯಾಜೆ

ಮುಕ್ಕೂರು: ಮಕ್ಕಳ ಪ್ರತಿಭೆಯನ್ನು ಅರಳಿಸಿ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೇಸಗೆ ಶಿಬಿರ ಉತ್ತಮ ವೇದಿಕೆ ಎಂದು ಈ ಬಾರಿಯ ದೆಹಲಿ ಗಣರಾಜೋತ್ಸವ ಪರೇಡ್‍ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಬಹುಮುಖ ಪ್ರತಿಭೆ ಹೇಮಸ್ವಾತಿ ಕುರಿಯಾಜೆ ಹೇಳಿದರು.

ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮುಕ್ಕೂರು ಶಾಲಾ ಹಿತ ಚಿಂತನಾ ಸಮಿತಿ ಹಾಗೂ ಶಾಲಾ ಎಸ್‍ಡಿಎಂಸಿ ವತಿಯಿಂದ ಮುಕ್ಕೂರು ಶಾಲೆಯಲ್ಲಿ ಎ.11 ರಿಂದ 20 ರ ತನಕ ಹಮ್ಮಿಕೊಂಡಿರುವ ಉಚಿತ ಬೇಸಗೆ ಶಿಬಿರ-ಚಿಣ್ಣರ ಸಂಭ್ರಮ-2022 ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ವಿಚಾರಗಳನ್ನು ಅರಿತುಕೊಂಡು ಮುಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದವರು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ನೇಸರ ಯುವಕ ಮಂಡಲ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ನೇಸರ, ಗಣೇಶೋತ್ಸವ ಸಂಘಟನೆಯು ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೆರುವಾಜೆ ಗ್ರಾಮದಲ್ಲಿ ಮೊದಲ ಬಾರಿಗೆ ಬೇಸಗೆ ಶಿಬಿರ ಆಯೋಜಿಸಿದೆ. ಇದಕ್ಕೆ ಅಭೂತಪೂರ್ವ ಬೆಂಬಲ ದೊರೆತಿರುವುದು ಸಂತಸ ಸಂಗತಿ ಎಂದರು.

ಜಿಲ್ಲಾ ರೈತ ಪ್ರಶಸ್ತಿ ಪುರಸ್ಕೃತೆ ಶ್ವೇತಾ ಕಾನಾವು ಮಾತನಾಡಿ, ಪಾಠ, ಮೊಬೈಲ್ ನಿಂದ ದೂರ ಉಳಿದು ಪಠ್ಯೇತರ ಚಟುವಟಿಕೆಯತ್ತ ತೊಡಗಿಕೊಳ್ಳುವಲ್ಲಿ ಬೇಸಗೆ ಶಿಬಿರ ಒಳ್ಳೆಯ ಅವಕಾಶ ಒದಗಿಸುತ್ತದೆ. ಚಿಣ್ಣರ ಸಂಭ್ರಮಕ್ಕೆ ವೇದಿಕೆ ಕಲ್ಪಿಸಿರುವ ಪ್ರಯತ್ನ ಶ್ಲಾಘನೀಯ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆ ಹಮ್ಮಿಕೊಂಡಿರುವುದು ಪ್ರಶಂನೀಯ ಕಾರ್ಯ. ಮುಂದಿನ ಏಳು ದಿನಗಳ ಕಾಲ ಮಕ್ಕಳಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಈ ಶಿಬಿರ ವೇದಿಕೆಯಾಗಲಿ ಎಂದರು.

ಪ್ರಗತಿಪರ ಕೃಷಿಕ, ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ಮಾತನಾಡಿ, ಹತ್ತಾರು ಊರಿನ, ಹತ್ತಾರು ಶಾಲೆಯ ಮಕ್ಕಳು ಒಂದು ಕಡೆ ಸೇರಿ ಸಂಭ್ರಮಿಸುವ ಜತೆಗೆ ಪಠ್ಯೇತರ ಸಂಗತಿ ಅರಿಯುವಲ್ಲಿ ಇಂತಹ ಶಿಬಿರ ಅವಕಾಶ ಕಲ್ಪಿಸುತ್ತದೆ. ಇದೊಂದು ಅತ್ಯುತ್ತಮ ಕಾರ್ಯ. ಇದಕ್ಕೆ ನಮ್ಮಲ್ಲೆರ ಬೆಂಬಲ ಇದೆ ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಅಂಕ ಗಳಿಕೆಯ ಜತೆಗೆ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕಾದ ಕಾಲಘಟ್ಟ ಇದಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಕೂಡ ಮುಖ್ಯವಾದದು. ಇದು ಬೇಸಗೆ ಶಿಬಿರದ ಮೂಲಕ ದೊರೆಯಲು ಸಾಧ್ಯವಿದೆ ಎಂದರು.

ಮುಕ್ಕೂರು ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಅಂಕತಡ್ಕ ಹಿ.ಪ್ರಾ.ಶಾಲೆಯ ನಿವೃತ್ತ ಶಿಕ್ಷಕಿ ಪಾರ್ವತಿ ಮೋನಪ್ಪ, ಮುಕ್ಕೂರು ಶಾಲಾ ಹಿತ ಚಿಂತನಾ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ಎಸ್‍ಡಿಎಂಸಿ ಸದಸ್ಯ ಲೋಕೇಶ್ ಬೀರುಸಾಗು ಉಪಸ್ಥಿತರಿದ್ದರು. ನೇಸರ ಯುವಕ ಮಂಡಲ ಸದಸ್ಯ ರಕ್ಷಿತ್ ಗೌಡ ಒರುಂಕು ಸ್ವಾಗತಿಸಿ, ಶಿಕ್ಷಕಿ ಸರಿತಾ ವಂದಿಸಿದರು. ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ನಿರೂಪಿಸಿದರು.

ಸಮ್ಮಾನ ಕಾರ್ಯಕ್ರಮ

ಈ ಸಂದರ್ಭದಲ್ಲಿ ಹೇಮಸ್ವಾತಿ ಕುರಿಯಾಜೆ ಅವರನ್ನು ಸಂಘಟನೆಯ ವತಿಯಿಂದ ಸಮ್ಮಾನಿಸಲಾಯಿತು. ವಿದ್ಯಾರ್ಥಿನಿ ಪ್ರಿಯಾ ಸಮ್ಮಾನ ಪತ್ರ ವಾಚಿಸಿದರು.

ಮಕ್ಕಳ ಸಂಭ್ರಮಕ್ಕೆ ತೋರಣ ಕಟ್ಟಿದ ಶಿಬಿರ

ಪೆರುವಾಜೆ, ಕಲ್ಪತಬೈಲು, ಮುಕ್ಕೂರು, ಚೆನ್ನಾವರ, ಮರ್ಕಂಜ ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಶಾಲೆಯ 85 ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡರು. ಪ್ರಥಮ ದಿನ ಸಂಪನ್ಮೂಲ ವ್ಯಕ್ತಿಗಳಾಗಿ ರಂಗಕರ್ಮಿ ಕೃಷ್ಣಪ್ಪ ಬಂಬಿಲ, ಚಿತ್ರಕಲಾ ಶಿಕ್ಷಕ ಧನಂಜಯ ಮರ್ಕಂಜ ಪಾಲ್ಗೊಂಡರು. ನೂರಾರು ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಗೆರೆಟೆಯಲ್ಲಿ ತಯಾರಿಸಿದ ವಸ್ತುಗಳ ಪ್ರದರ್ಶನ

ಈ ಸಂದರ್ಭದಲ್ಲಿ ಗೆರೆಟೆಯಲ್ಲಿ ತಯಾರಿಸಿದ ವಿವಿಧ ಬಗೆಯ ದಿನ ಬಳಕೆಯ ವಸ್ತುಗಳ ಪ್ರದರ್ಶನ ನಡೆಯಿತು. ಚಿತ್ರಕಲಾವಿದ ಧನಂಜಯ ಮರ್ಕಂಜ ಅವರು ಗೆರೆಟೆ ಬಳಸಿ ಮಾಸ್ಕ್, ಲೋಟ ಸೇರಿದಂತೆ ಹತ್ತಾರು ಬಗೆಯ ಸಾಮಗ್ರಿಗಳನ್ನು ತಯಾರಿಸಿದ್ದು ಇದು ಮಕ್ಕಳ ಮತ್ತು ಪೋಷಕರ ಗಮನ ಸೆಳೆಯಿತು.

Leave A Reply

Your email address will not be published.