ಮಂಗಳೂರು: ಜಿಲ್ಲಾ ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ !! | ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಾರ್ದನ ಪೂಜಾರಿ ಪುತ್ರ

ದ.ಕ ಜಿಲ್ಲೆ ಕಂಡ ಜನಪ್ರಿಯ ರಾಜಕೀಯ ನಾಯಕರಲ್ಲಿ ಜನಾರ್ದನ ಪೂಜಾರಿ ಕೂಡಾ ಒಬ್ಬರು. ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ ರಾಜಕೀಯದಲ್ಲಿ ಇಂದಿಗೂ ತಮ್ಮ ಪ್ರಭಾವವನ್ನೂ ಉಳಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ, ಕೇಂದ್ರ ಸಚಿವರಾಗಿದ್ದರೂ ಕೂಡ ತಮ್ಮ ಮಕ್ಕಳನ್ನು ಎಂದಿಗೂ ರಾಜಕೀಯಕ್ಕೆ ಕರೆ ತಂದಿರಲಿಲ್ಲ. ಆದರೆ ಇದೀಗ ಜನಾರ್ದನ ಪೂಜಾರಿ ಅವರ ಪುತ್ರ ದೀಪಕ್‌ ಪೂಜಾರಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎಐಸಿಸಿ ದೀಪಕ್‌ ಪೂಜಾರಿ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಜನಾರ್ದನ ಪೂಜಾರಿ ಅವರು ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆತರುತ್ತಾರೆಯೇ ಎನ್ನುವ ಕುತೂಹಲ ಸಹಜವಾಗಿತ್ತು. ಆದರೆ ತಾವು ಸಕ್ರೀಯ ರಾಜಕಾರಣದಲ್ಲಿ ಇದ್ದಾಗಲೂ ಒಮ್ಮೆಯೂ ಮಕ್ಕಳನ್ನು ರಾಜಕೀಯಕ್ಕೆ ಕರೆತಂದಿರಲಿಲ್ಲ. ಆದರೆ ಈಗ ಎಐಸಿಸಿ ಜನಾರ್ದನ ಪೂಜಾರಿ ಅವರ ಪುತ್ರ ದೀಪಕ್‌ ಪೂಜಾರಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜನಾರ್ದನ ಪೂಜಾರಿ ಅವರಿಗೆ ಒಟ್ಟು ಮೂವರು ಮಕ್ಕಳು. ಮೊದಲ ಮಗ ವಿಭಾಕರ, ಎರಡನೇ ಮಗ ಸಂತೋಷ್‌ ಅವರು ಈಗಾಗಲೇ ದೆಹಲಿಯಲ್ಲಿ ಚಾರ್ಟೆಡ್‌ ಅಕೌಂಟೆಂಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರನೇ ಮಗ ದೀಪಕ್‌ ಪೂಜಾರಿ ಅವರು ಇಂಜಿನಿಯರಿಂಗ್‌ ಪದವಿ ಪಡೆದು ಕುದುರೆಮುಖ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾಗಿದ್ದ ಜನಾರ್ದನ ಪೂಜಾರಿ ಅವರು ಸಕ್ರಿಯ ರಾಜಕಾರಣದಿಂದ ದೂರವಾಗಿದ್ದಾರೆ. ಇದೀಗ ಅವರ ಮಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದು ಕೈ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ಮೂಡಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ದೀಪಕ್‌ ಪೂಜಾರಿ ಅವರು ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಜಿಲ್ಲೆಯಲ್ಲಿ ಹರಿದಾಡುತ್ತಿರುವುದು ಸತ್ಯ.

Leave A Reply

Your email address will not be published.