ಲವ್ ಜಿಹಾದ್ ಗೆ ಗುರಿಯಾದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ !! | ತೀವ್ರ ಚರ್ಚೆಗೆ ಗ್ರಾಸವಾದ ಪ್ರಾಧಿಕಾರದ ಅಧ್ಯಕ್ಷರ ಬಹಿರಂಗ ಪತ್ರ

ಲವ್ ಜಿಹಾದ್ ಗೆ ಗುರಿಯಾದ ಹಿಂದೂ ಧರ್ಮದ ಮನೆಯವರಿಗೆ ಸಾಮಾಜಿಕ ಬಹಿಷ್ಕಾರಕ್ಕೆ ಗುರಿಪಡಿಸಬೇಕೆಂಬ ಬೇಡಿಕೆ ಇದೀಗ ವ್ಯಕ್ತವಾಗಿದ್ದು, ಸರ್ಕಾರದ ಅಂಗವಾಗಿರೋ ಪ್ರಾಧಿಕಾರದ ಅಧ್ಯಕ್ಷರೇ ಬಹಿರಂಗವಾಗಿ ಪತ್ರ ಬರೆದಿದ್ದು, ಸಮಾಜ ಉಳಿಯಬೇಕೆಂದರೆ ಇಂಥಹ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಅಂತ ಸಮರ್ಥಿಸಿಕೊಂಡಿದ್ದಾರೆ.

ಹೌದು. ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನ ಪತ್ರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅನ್ಯ ಧರ್ಮಿಯನೊಂದಿಗೆ ಹಿಂದೂ ಯುವತಿ ಮದುವೆಯಾದ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರಗಿ ಪತ್ರ ಬರೆದಿದ್ದಾರೆ.

ಲವ್ ಜಿಹಾದ್ ಗೆ ಗುರಿಯಾದ ಕುಟುಂಬಗಳನ್ನು ಬಹಿಷ್ಕಾರಿಸುವಂತೆ ಒತ್ತಡ ಹಾಕಲಾಗುತ್ತಿದೆ. ಸಾಮಾಜಿಕ ಬಹಿಷ್ಕಾರ ಸೇರಿದಂತೆ, ಹಲವು ಕಠಿಣ ಕ್ರಮಕೈಗೊಳ್ಳುವಂತೆ ಎಸ್.ಎಸ್.ಕೆ ಸಮಾಜದ ಧರ್ಮದರ್ಶೀ ನೀಲಕಂಠ ಜಡಿ ಅವರಿಗೆ ನಾಗೇಶ ಕಲಬುರಗಿ ಪತ್ರ ಬರೆದಿದ್ದಾರೆ.

ನಗರಾಭಿವೃದ್ಧಿ ಲೆಟರ್ ಹೆಡ್ನಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಒತ್ತಾಯಿಸಿ ಪತ್ರ ಬರೆಯಲಾಗಿದೆ. ಎಸ್.ಎಸ್.ಕೆ. ಸಮಾಜದಲ್ಲಿ ಹಲವು ಜಿಹಾದ್ ಪ್ರಕರಣಗಳು ನಡೆದಿವೆ. ಈಗ ಸಮಾಜ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಯಾರಾದ್ರೂ ಮುಸ್ಲಿಂ ಸಮಾಜದ ಯುವಕನನ್ನು ಮದುವೆಯಾದ್ರೆ, ಇಲ್ಲವೇ ಮುಸ್ಲಿಂ ಸಮಾಜದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಂಡು ಬಂದರೆ ಅಂತವರ ಮೇಲೆ ಕಠಿಣ ಕ್ರಮ ಅನಿವಾರ್ಯವಾಗಿದೆ. ಆ ಕುಟುಂಬವನ್ನು ಸಮಾಜದಿಂದ ಹೊರಗಿಡಬೇಕು. ಸಮಾಜದ ಎಲ್ಲಾ ದೇವಸ್ಥಾನಗಳ ಪ್ರವೇಶಕ್ಕೆ ನಿರ್ಬಂಧಿಸಬೇಕು.

ಅಂತಹ ಕುಟುಂಬಗಳಿಗೆ ಯಾರು ಹೆಣ್ಣು ಕೊಡುವಂತಿಲ್ಲ. ಆ ಕುಟುಂಬದ ಯಾವುದೇ ಕಾರ್ಯಕ್ರಮದಲ್ಲಿ ಸಮಾಜದವರು ಯಾರು ಭಾಗಿಯಾಗುವಂತಿಲ್ಲ. ಇಂತಹ ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಎಚ್ಚರಿಕೆ ಗಂಟೆ ಬಾರಿಸಬೇಕು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್.ಎಸ್.ಕೆ ಸಮಾಜದ ಕೇಂದ್ರ ಪಂಚ ಟ್ರಸ್ಟ್ಗೆ ನಾಗೇಶ ಕಲಬುರಗಿ ಆಗ್ರಹಿಸಿದ್ದಾರೆ.

ಒಟ್ಟಾರೆ ನಾಗೇಶ ಕಲಬುರಗಿ ಪತ್ರ ತೀವ್ರ ಚರ್ಚೆಗೆ ಗ್ರಾಸ ಮಾಡಿದೆ. ಸರ್ಕಾರದ ಪ್ರತಿನಿಧಿಯಾಗಿರೋ ವ್ಯಕ್ತಿಯೋ ಈ ರೀತಿ ಸಾಮಾಜಿಕ ಬಹಿಷ್ಕಾರದಂತಹ ಕಾನೂನು ಬಾಹಿರ ಕ್ರಮ ಕೈಗೊಳ್ಳುವಂತೆ ಸಲಹೆ ನೀಡೋದು ಸರಿಯೇ ಎಂಬ ಚರ್ಚೆ ನಡೆದಿದೆ.

Leave A Reply

Your email address will not be published.