ಸಾವು ಬದುಕಿನ ನಡುವೆ ಹೋರಾಟ ನಡೆಸಿದರೂ ಕರುಣೆ ತೋರದ ವೈದ್ಯ!! ನಿರ್ಲಕ್ಷ್ಯಕ್ಕೆ ಬಾಲಕ ಸಾವು-ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಆಸ್ಪತ್ರೆಯಲ್ಲಿ ಬಾಲಕನೋರ್ವ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ವೈದ್ಯರು ತಕ್ಷಣಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಬಾಲಕ ಕೊನೆಯುಸಿರೆಳೆದಿದ್ದು, ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಪುದಿಮಾಡಿ ಆಕ್ರೋಶ ಹೊರಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.ಮೃತ ಬಾಲಕನನ್ನು ಮೂರ್ತಿ(13) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಬಣ್ಣದ ಓಕುಳಿಯ ಸಂದರ್ಭ ಶಿವು ಹಾಗೂ ಮೂರ್ತಿ ಎಂಬಿಬ್ಬರು ಬಾಲಕರು ಕೆರೆಗೆ ಈಜಲು ತೆರಳಿದ್ದು, ಈ ಸಂದರ್ಭ ಈಜು ಬಾರದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಮುಳುಗಿ ಶಿವು ಮೃತಪಟ್ಟರೆ, ಮೂರ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಕೂಡಲೇ ಆಸ್ಪತ್ರೆಗೆ ಕರೆತಂದಿದ್ದರೂ ವೈದ್ಯರು ತಕ್ಷಣಕ್ಕೆ ಸ್ಪಂದಿಸಿರಲಿಲ್ಲ.

ವೈದ್ಯರ ಬಳಿ ತೆರಳಿ ಅಂಗಲಾಚಿದರೂ ಕರುಣೆ ತೋರದೆ ನಿರ್ಲಕ್ಷ್ಯ ವಹಿಸಿದ್ದು, ಕೆಲ ನಿಮಿಷಗಳ ಜೀವನ್ಮರಣಹೋರಾಟದ ಬಳಿಕ ಬಾಲಕ ಮೃತಪಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಪುಡಿಮಾಡಿ ವೈದ್ಯರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದು, ಬಳಿಕ ಪೊಲೀಸರು ಆಗಮಿಸಿ ಕುಟುಂಬಸ್ಥರನ್ನು ಸಂತೈಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.