ಉದ್ಯಮಿ ಮರ್ಡರ್ ಕೇಸ್ : ಭೂಗತ ಪಾತಕಿ ಬನ್ನಂಜೆ ರಾಜಾ, ಉಡುಪಿಯ ಭಜಂತ್ರಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ !

ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ನಾಲ್ವರಿಗೆ ಕೋಕಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಅದಿರು ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ಪ್ರಕಟಗೊಂಡಿದೆ.

ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ಆರ್ ಎನ್ ನಾಯಕ್ ಅವರನ್ನು 3 ಕೋಟಿ ಹಫ್ತಾ ನೀಡದಿದ್ದಕ್ಕೆ ಹತ್ಯೆ ಮಾಡಲಾಗಿತ್ತು. 2013ರ ಡಿಸೆಂಬರ್ 21 ರಂದು ಉದ್ಯಮಿ ನಾಯಕ್ ಕೊಲೆಯಾಗಿತ್ತು. ಸುಪಾರಿ ನೀಡಿ ಕೊಲೆ ಮಾಡಿಸಿದ ಆರೋಪ ಸಾಬೀತಾಗಿತ್ತು. ಈ ಹಿನ್ನೆಲೆ, ಬನ್ನಂಜೆ ರಾಜ ಸೇರಿ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

ಬೆಳಗಾವಿಯ ಕೋಕಾ ನ್ಯಾಯಾಲಯದಿಂದ ಏಪ್ರಿಲ್ 4, ಸೋಮವಾರ ತೀರ್ಪು ನೀಡಿದ್ದು, ಎ-2 ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಎ-3 ಬೆಂಗಳೂರಿನ ಅಭಿ ಬಂಡಗಾರ್, ಎ-4 ಉಡುಪಿಯ ಗಣೇಶ್ ಭಜಂತ್ರಿ, ಎ-9 ಉಡುಪಿಯ ಬನ್ನಂಜೆ ರಾಜಾ ಸೇರಿ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಘಟನೆ ನಡೆದು ಬರೋಬ್ಬರಿ 7 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. ಇದು ರಾಜ್ಯದ ಮೊದಲ ಕೋಕಾ ಪ್ರಕರಣವಾಗಿದೆ.

ಅಂಕೋಲಾ ಉದ್ಯಮಿ, ಬಿಜೆಪಿ ನಾಯಕ ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬನ್ನಂಜೆ ರಾಜ ವಿರುದ್ಧ ಕೋಕಾ ಕಾಯ್ದೆಯಡಿ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಪ್ರಕರಣ ದಾಖಲಿಸಿದ್ದರು. 2015ರ ಫೆಬ್ರವರಿ 12 ರಂದು ಮೊರಕ್ಕೊದಲ್ಲಿ ಬನ್ನಂಜೆ ರಾಜನನ್ನು ಬಂಧನ ಮಾಡಲಾಗಿತ್ತು. ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಡಿ ಮೊರಕ್ಕೊದಲ್ಲಿ ಬಂಧಿಸಲಾಗಿತ್ತು. ಬಳಿಕ ಭಾರತಕ್ಕೆ ಭೂಗತ ಪಾತಕಿ ಬನ್ನಂಜೆ ರಾಜ ಹಸ್ತಾಂತರ ಮಾಡಲಾಗಿತ್ತು.

ಬನ್ನಂಜೆ ರಾಜನನ್ನು 2015ರ ಆಗಸ್ಟ್ 14ರಂದು ಭಾರತಕ್ಕೆ
ಕರೆತರಲಾಗಿತ್ತು. ಈ ವಿಚಾರಣೆ ಬರೋಬ್ಬರಿ 7 ವರ್ಷ ನಡೆದಿದ್ದು, ಸುದೀರ್ಘ ವಿಚಾರಣೆ ಬಳಿಕ ಬೆಳಗಾವಿ ಕೋಕಾ ವಿಶೇಷ ನ್ಯಾಯಾಲಯ
ಇಂದು ಅಂತಿಮ ತೀರ್ಪು ಪ್ರಕಟಿಸಿದೆ. ಹಿರಿಯ ವಕೀಲ ಕೆ.ಜಿ. ಪುರಾಣಿಕಮಠ ಸರ್ಕಾರದ ಪರ ವಕಾಲತ್ತು
ವಹಿಸಿದ್ದರು.

Leave A Reply

Your email address will not be published.