ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಹಾಗೂ ಕೋರಮಂಗಲದಲ್ಲಿ ಕಚೇರಿ ಹೊಂದಿರುವ ಖಾತಾಬುಕ್ ಸ್ಟಾರ್ಟ್ ಅಪ್ ಸಂಸ್ಥೆಗಳು ಶತಕೋಟಿ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದರೂ, ಕಚೇರಿಗೆ ತೆರಳುವ ರಸ್ತೆ ಹದಗೆಟ್ಟಿರುವ ಪದೇ ಪದೇ ಕಡಿತಗೊಳ್ಳುವ ವಿದ್ಯುತ್,ಹಾಗೂ ಕಳಪೆ ಗುಣಮಟ್ಟದಲ್ಲಿ ಸರಬರಾಜಾಗುವ ನೀರಿನ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಖಾತಾಬುಕ್ ಸ್ಟಾರ್ಟ್ ಅಪ್ ನ ಸಂಸ್ಥಾಪಕ,ಕಾರ್ಯನಿರ್ವಾಹಣಾಧಿಕಾರಿ ರವೀಶ್ ನರೇಶ್ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.
ಭಾರತದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸೌಕರ್ಯಗಳು ಸಿಲಿಕಾನ್ ಸಿಟಿಯಲ್ಲಿ ಇಲ್ಲದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ತೆಲಂಗಾಣ ಸರ್ಕಾರ ಟ್ವೀಟ್ ಮಾಡುವ ಮೂಲಕ ಕರ್ನಾಟಕ ಸರ್ಕಾರವನ್ನು ವ್ಯಂಗ್ಯವಾಡಿದ್ದು ಹೈದರಾಬಾದ್ ಗೆ ಬರುವಂತೆ ಆಹ್ವಾನಿಸಿದೆ.
ತೆಲಂಗಾಣ ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾದ ಕೆ.ಟಿ ರಾಮರಾವ್ ಈ ರೀತಿಯ ಪ್ರತಿಕ್ರಿಯೆ ನೀಡಿದ್ದು, ಇಂದೇ ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ, ಹೈದರಾಬಾದ್ ಗೆ ಬನ್ನಿ ಎಂದು ವ್ಯಂಗ್ಯವಾಡಿದ್ದಾರೆ. ನಾವು ಉತ್ತಮವಾದ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಇಲ್ಲಿ ಕಚೇರಿ ಪ್ರಾರಂಭಿಸಿ ಎಂದು ಸ್ಟಾರ್ಟ್ ಅಪ್ ಉದ್ಯಮಿಗಳನ್ನು ತೆಲಂಗಾಣ ಸರ್ಕಾರ ತಮ್ಮ ರಾಜ್ಯಕ್ಕೆ ಆಹ್ವಾನಿಸಿದೆ.