ಪ್ರೀತಿಸಿ ಮದುವೆಯಾದ ದಂಪತಿಗೆ ಮರುದಿನವೇ ಕಾದಿತ್ತು ಶಾಕ್ !! | ಯುವಕನಿಗೆ ಹೊಡೆದು, ಯುವತಿಯನ್ನು ಎಳೆದೊಯ್ದು ಚಿಗುರಿದ ಸಂಸಾರವನ್ನು ಒಡೆದ ಪೋಷಕರು

ಪ್ರೀತಿಸಿ ಮದುವೆಯಾಗುವುದೆಂದರೆ ಸುಲಭದ ಮಾತಲ್ಲ. ಆ ಮದುವೆಗೆ ಹೆತ್ತವರಿಂದ ವಿರೋಧ ಬರುವುದು ಸಹಜ. ಆದರೆ ಹೆತ್ತವರನ್ನು ಧಿಕ್ಕರಿಸಿ ಮದುವೆಯಾಗುವವರು ಅದೆಷ್ಟೋ ಮಂದಿ ಇದ್ದಾರೆ. ಅಂತೆಯೇ ಇಲ್ಲಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ಇನ್ನೇನು ಹೊಸ ಜೀವನ ಆರಂಭಿಸಿ ಸುಖ ಸಂಸಾರದ ಕನಸು ಕಂಡಿದ್ದರು. ಆದರೆ ಅವರ ಈ ಆಕಾಂಕ್ಷೆಗೆ ಹೆಣ್ಣಿನ ಹೆತ್ತವರು ಕೊಳ್ಳಿ ಇಟ್ಟಿದ್ದಾರೆ.

ಹೌದು. ಮದುವೆಯಾದ ಮರುದಿನವೇ ಯುವತಿಯ ಪೋಷಕರು ಯುವಕನ ಮೇಲೆ ಹಲ್ಲೆ ಮಾಡಿ ಆಕೆಯನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದು, ಯುವ ಜೋಡಿಯನ್ನು ಆರಂಭದಲ್ಲೇ ಬೇರೆ ಬೇರೆ ಮಾಡಿರುವ ಪ್ರಕರಣ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಹಳ್ಳಿ ಗ್ರಾಮದ ಅಭಿಷೇಕ್ ಮತ್ತು ಚೋಳೇನಹಳ್ಳಿ ಗ್ರಾಮದ ಅನನ್ಯ ಪರಸ್ಪರ ಪ್ರೀತಿಸುತ್ತಿದ್ದರು. ಮಾರ್ಚ್​ 28ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದಲ್ಲಿ ಇಬ್ಬರು ಮದುವೆಯಾದರು. ಇದಾದ ಒಂದೇ ದಿನದಲ್ಲಿ ಇಬ್ಬರಿಗೂ ಆಘಾತ ಕಾದಿತ್ತು. ಯುವತಿಯನ್ನು ಆಕೆಯ ಪೋಷಕರು ಮನೆಗೆ ಎಳೆದೊಯ್ದಿದ್ದಾರೆ ಎಂದು ನವವಿವಾಹಿತ ಅಭಿಷೇಕ್​ ಆರೋಪಿದ್ದಾರೆ.

ಮದುವೆಯಾದ ಒಂದೇ ದಿನಕ್ಕೆ ಬೇರೆಯಾದ ಜೋಡಿ
ಮಾ. 29 ರಂದು ಊರಿಗೆ ಮರಳುತ್ತಿದ್ದಾಗ ಹುಣಸೂರಿನ ಕೆಫೆ ಕಾಫಿ ಡೇ ಬಳಿ ಅನನ್ಯಳ ಸಂಬಂಧಿಗಳು ಬಂದು ಅಭಿಷೇಕ್​ಗೆ ಹೊಡೆದಿದ್ದರಂತೆ. ನಂತರ ಅನನ್ಯಳನ್ನು ಕರೆದುಕೊಂಡು ಹೋಗಿದ್ದಾರೆ. ನೊಂದ ಅಭಿಷೇಕ್​ ಹುಣಸೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಭಿಷೇಕ್ ಅಸಮಾಧಾನ ಹೊರಹಾಕಿದ್ದಾರೆ.

Leave A Reply

Your email address will not be published.