‘ನಿನ್ನ ಹೆಂಡತಿಯನ್ನು ನನ್ನ ಜೊತೆ ಕಳುಹಿಸು’ ಎಂದು ಗಂಡನ ಎದುರೇ ರಂಪಾಟ ಮಾಡಿದ ಭೂಪ| ಅಪಪ್ರಚಾರದ ಸುಳಿಯಲ್ಲಿ ಸಿಕ್ಕ ಹೆಂಡತಿ!

ಗಂಡನ ಎದುರೇ ಬೇರೊಬ್ಬ ವ್ಯಕ್ತಿ ಹೆಂಡತಿಯನ್ನು ನನ್ನ ಜೊತೆ ಕಳುಹಿಸು ಎಂದು ಕರೆದರೇ ಗಂಡನಿಗೆ ಏನಾಗಬೇಡ ಹೇಳಿ? ಅದೇ ಇಲ್ಲಿ ಆಗಿರುವುದು. ಈ ಪ್ರಕರಣದಲ್ಲಿ ಮಾತ್ರ ಟ್ವಿಸ್ಟ್ ಇದೆ. ಬನ್ನಿ ತಿಳಿಯೋಣ.

ಈ ಘಟನೆಯಲ್ಲಿ ಪತಿಯ ದೂರದ ಸಂಬಂಧಿಯೊಬ್ಬ ಮಾಡಿದ ದುಷ್ಕೃತ್ಯದಿಂದ ಗೃಹಿಣಿಯೊಬ್ಬಳು ದುರಂತ ಅಂತ್ಯ ಕಂಡಿದ್ದಾಳೆ. ಇಲ್ಲಿ ಮಹಿಳೆಯ ತಪ್ಪು ಏನು ಇಲ್ಲದಿದ್ದರೂ ಬೆನ್ನು ಬಿದ್ದ ಭೂಪ, ಕೊನೆಗೆ ಮಹಿಳೆಯ ಗಂಡನ ಮುಂದೆ ಬಂದು ನಿನ್ನ ಹೆಂಡತಿಯನ್ನು ನನ್ನ ಜೊತೆ ಕಳುಹಿಸಿಕೊಡು ಎಂದು ರಾದ್ಧಾಂತ ಮಾಡಿ ಆಕೆಯ ಸಾವಿಗೂ ಕಾರಣನಾಗಿದ್ದಾನೆ.

ಈ ಘಟನೆ ನಡೆದಿರುವುದು ಸೊರಬ ತಾಲೂಕು ಗುಂಜನೂರಿ ನಲ್ಲಿ. ಈ ಗ್ರಾಮದ 28 ವರ್ಷದ ವಿವಾಹಿತೆಗೆ ಅದೇ ಗ್ರಾಮದ ವೀರೇಂದ್ರನ ಪರಿಚಯವಾಗಿತ್ತು. ಆತ ಆಕೆಯ ಪತಿಯ ದೂರದ ಸಂಬಂಧಿ ಕೂಡಾ ಆಗಿದ್ದ. ಮಹಿಳೆಯ ಪರಿಚಯ ಮಾಡಿಕೊಂಡ ವೀರೇಂದ್ರ ನಂತರ ಮಹಿಳೆಯ ಬಗ್ಗೆ ಸಾರ್ವಜನಿಕವಾಗಿ ಸುಳ್ಳು ಹಾಗೂ ಮಾನಹಾನಿ ಮಾತುಗಳನ್ನು ಹೇಳುತ್ತಾ ಬಂದ. ಖಾಸಗಿ ಕ್ಷಣಗಳ ವೀಡಿಯೋ ಇದೆ ಎಂದು ಊರೆಲ್ಲಾ ಹೇಳುತ್ತಾ ಅಪಪ್ರಚಾರ ಮಾಡತೊಡಗಿದ. ಮಹಿಳೆಗೆ ಮಾನಸಿಕವಾಗಿ ಹಿಂಸೆ ನೀಡಿದ. ಮಹಿಳೆಗೆ ಆತನ ಜೊತೆ ಯಾವುದೇ ಸಂಬಂಧವಿಲ್ಲದಿದ್ದರೂ ಇದೆ ಎಂದು ಅಪಪ್ರಚಾರ ಮಾಡುತ್ತಿದ್ದ.

ಇಷ್ಟಕ್ಕೆ ಸುಮ್ಮನಾಗದೇ ವಿರೇಂದ್ರ, ಮಹಿಳೆಯ ಮನೆಗೆ ಕೂಡಾ ಹೋಗಿದ್ದ. ಆಕೆಯ ಗಂಡನ ಎದುರೇ ‘ನಿನ್ನ ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಿಕೊಡು’ ಎಂದು ವೀರೇಂದ್ರ ರಂಪಾಟ ಮಾಡಿದ್ದ. ಇದು ದೊಡ್ಡ ಸುದ್ದಿಯಾಗಿ ಗ್ರಾಮದ ಹಿರಿಯರು ದೇವಸ್ಥಾನದಲ್ಲಿ ಪಂಚಾಯಿತಿ ನಡೆಸಿ ವೀರೇಂದ್ರನಿಗೆ ಬುದ್ಧಿವಾದ ಹೇಳಿದ್ದರು. ಆದರೆ ಈ ಎಲ್ಲಾ ವಿಷಯಗಳಿಂದ ನೊಂದ ಮಹಿಳೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸೊರಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬದುಕಲಿಲ್ಲ.

ವಿರೇಂದ್ರನ ಈ ದುಷ್ಕೃತ್ಯಕ್ಕೆ ಅಮಾಯಕ ಗೃಹಿಣಿ ಬಲಿಯಾಗಿದ್ದು ಮಾತ್ರ ದುರದೃಷ್ಟಕರ.

Leave A Reply

Your email address will not be published.