ಈ ಊರಿನ ಯುವಕರಿಗೆ ಮದುವೆ ಭಾಗ್ಯವಿಲ್ಲ; ದಂಪತಿಗಳಿಗೆ ಸಂಸಾರದ ಸುಖವಿಲ್ಲ ; ಕಾರಣ ನೊಣ!

ಸುದೀಪ್ ಅಭಿನಯದ ‘ಈಗ ‘ ಸಿನಿಮಾದಲ್ಲಿ ಒಂದು ನೊಣ ನಾಯಕನ ನೆಮ್ಮದಿಯೇ ಭಂಗ ಮಾಡಿತು.‌ ಹಾಗೇ ಇಲ್ಲೊಂದು ನೊಣ ಹಲವಾರು ಮಂದಿಯ ದಾಂಪತ್ಯದ ಜೀವನವನ್ನೇ ನಾಶ ಮಾಡಿದೆ. ‌ಇದು ಸಿನಿ‌ಕಥೆ ಅಲ್ಲ ನಿಜವಾದ ವ್ಯಥೆ. ನೊಣ ಗಳಿಂದ ಇಲ್ಲಿನ ಯುವಕರನ್ನು ಮದುವೆಯಾಗಲು ಬೇರೆ ಗ್ರಾಮದ ಯುವತಿಯರು ಹಿಂದೆ ಮುಂದೆ ನೋಡುವಂತಾಗಿದೆ. ಪಾಪ, ಯುವಕರು ಸಿಂಗಲ್ ಆಗೇ ಜೀವನ ಮಾಡಬೇಕಾಗಿದೆ !

ನೊಣಗಳ ಕಾಟದಿಂದಲೇ ನಿಶ್ಚಯವಾಗಿದ್ದ ಮೂರು ಮದುವೆಗಳು ಈಗಾಗಲೇ ಬಿದ್ದು ಹೋಗಿವೆ. ಹೌದು, ನೀವು ಇದನ್ನು ನಂಬಲೇ ಬೇಕು ! ಇಷ್ಟೆ ಅಲ್ಲದೆ ನೊಣಗಳು ಇನ್ನೇನು ಅವಘಡಗಳನ್ನು ಮಾಡಿದೆ ಗೊತ್ತ ? ಇಷ್ಟೆಲ್ಲಾ ಆಗುತ್ತಿರುವುದು ಎಲ್ಲಿ ಗೊತ್ತ ?

ಇಲ್ಲಿ ನೊಣಗಳಿವೆ ಎಚ್ಚರಿಕೆ !ಬಿಹಾರದ ಗ್ರಾಮವೊಂದರಲ್ಲಿ ನೊಣಗಳ ಕಾಟಕ್ಕೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.  ಇಲ್ಲಿನ ಜನರ ಜೀವನವೇ ನೋಣಗಳ ಪಾಲಾಗಿವೆ. ಗೋಪಾಲಗಂಜ್ ಜಿಲ್ಲೆಯ ಖ್ವಾಜೆಪುರ್ ಪಂಚಾಯತ್ ವ್ಯಾಪ್ತಿಯ ವಿಕ್ರಮ್‌ಪುರ ಗ್ರಾಮದ ಜನರ ಜೀವನಕ್ಕೆ ನೊಣಗಳು ಖಳನಾಯಕ ಆಗಿವೆ. ನೋಣಗಳ ಕಾಟಕ್ಕೆ ಅನೇಕರು ಈಗಾಗಲೇ ಗ್ರಾಮವನ್ನೇ ತೊರೆದು ಬೇರೆಡೆ ವಲಸೆ ಕೂಡ ಹೋಗಿದ್ದಾರೆ.

ನೊಣಗಳ ಹಾವಳಿಯನ್ನು ತಾಳದೇ ಗಂಡನ ಮನೆ ಬಿಟ್ಟು ಹೆಂಡತಿಯರು ಹೋಗಿದ್ದಾರೆ. ಗಂಡನ ಪಕ್ಕ ಬಂದು ಮಲಗಿದರೆ ಅಲ್ಲೂ ನೊಣಗಳ ಡಿಸ್ಟರ್ಬೆನ್ಸ್. ಈ ನೊಣದ ಸುದ್ದಿ ಸುತ್ತಮುತ್ತಲ ಊರಿನಲ್ಲಿ ಹಬ್ಬಿ, ಈಗ ಅಲ್ಲಿನ ಯುವಕರನ್ನು ಮದುವೆಯಾಗಲು ಬೇರೆ ಗ್ರಾಮದ ಯುವತಿಯರು ಹಿಂದೆಮುಂದೆ ನೋಡುವಂತಾಗಿದೆ. ನೊಣಗಳಿಂದ ರಕ್ಷಣೆ ಪಡೆಯಬೇಕಾದರೆ ಹಗಲು-ರಾತ್ರಿ ಎನ್ನದೇ ಸೊಳ್ಳೆ ಪರದೆ ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಕಳೆದ ಐದು ವರ್ಷಗಳಿಂದಲೂ ನೊಣಗಳ ಹಾವಳಿಯಲ್ಲೇ ಜನರು ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಸಮೀಪದಲ್ಲಿರುವ ಕೋಳಿ ಫಾರಂಗಳು ಎನ್ನಲಾಗುತ್ತಿದೆ. ನೊಣಗಳ ಕಾಟ ತಪ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರೂ ಇದುವರೆಗೆ ಯಾವುದೇ ಕ್ರಮವಾಗಿಲ್ಲ. ನೊಣಗಳ ಕಾಟಕ್ಕೆ ಕಡಿವಾಣ ಹಾಕಬೇಕಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಂಗಮಾಯವಾಗಿದ್ದಾರೆ.

Leave A Reply

Your email address will not be published.