ಬಿಜೆಪಿ ವಿಜಯ ಪತಾಕೆ ಹಾರಿಸಿದ ಖುಷಿಗೆ ಸಿಹಿ ಹಂಚಿದ್ದೇ ತಪ್ಪಾಯ್ತಾ !!? | ತನ್ನ ಸಮುದಾಯದ ವ್ಯಕ್ತಿಗಳಿಂದಲೇ ನಡೆಯಿತು ಮುಸ್ಲಿಂ ಯುವಕನ ಬರ್ಬರ ಹತ್ಯೆ

ಎರಡನೇ ಬಾರಿಗೆ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದಕ್ಕೆ ಸಂಭ್ರಮಿಸಿದ ಮುಸ್ಲಿಂ ಯುವಕನೋರ್ವನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಕುಶಿನಗರದ ರಾಮ್‌ಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್‌ಘರ್ಹಿ ಗ್ರಾಮದಲ್ಲಿ ಮುಸ್ಲಿಂ ಯುವಕನ ಹತ್ಯೆಯಾಗಿದೆ. ಹತ್ಯೆಯಾದ ಯುವಕನನ್ನು ಬಾಬರ್ ಎಂದು ಗುರುತಿಸಲಾಗಿದೆ. ಬಾಬರ್ ಬಿಜೆಪಿ ಪರ ಪ್ರಚಾರ ಮಾಡಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಸಿಹಿ ಹಂಚಿದ್ದ. ಇದೇ ಕಾರಣಕ್ಕೆ ಬಾಬರ್ ನನ್ನು ತೀವ್ರವಾಗಿ ಥಳಿಸಲಾಗಿದೆ ಎನ್ನಲಾಗಿದೆ.

ಬಾಬರ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರಿಂದ, ಅಕ್ಕಪಕ್ಕದಲ್ಲಿ ವಾಸವಿರುವ ಸಮುದಾಯದವರು ಸಿಟ್ಟಿಗೆದ್ದಿದ್ದಾರೆ ಎಂದು ಮೃತ ಬಾಬರ್ ಸಂಬಂಧಿಕರು ಆರೋಪಿಸಿದ್ದಾರೆ. ಈ ಕಾರಣದಿಂದಾಗಿ ಬಾಬರ್ ನನ್ನು ತೀವ್ರವಾಗಿ ಥಳಿಸಲಾಗಿದೆ ಎನ್ನಲಾಗಿದೆ. ಇದಾದ ನಂತರ ಗಾಯಗೊಂಡ ಬಾಬರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಬರ್ ಮೃತಪಟ್ಟಿದ್ದಾರೆ.

ಈ ಘಟನೆ ಮಾರ್ಚ್ 20 ರಂದು ನಡೆದಿದೆ. ಬಿಜೆಪಿ ಬೆಂಬಲಿಗ ಬಾಬರ್ ಅವರ ಮೃತದೇಹವನ್ನು ಭಾನುವಾರ ಗ್ರಾಮಕ್ಕೆ ಕರೆತಂದಾಗ, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ನಡೆಸಲು ಕೂಡಾ ಕುಟುಂಬಸ್ಥರು ನಿರಾಕರಿಸಿದ್ದರು. ನಂತರ ಸ್ಥಳಕ್ಕೆ ಸ್ಥಳೀಯ ಆಡಳಿತ, ಸ್ಥಳೀಯ ಶಾಸಕರು ಬರಬೇಕಾಯಿತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದೆ. ಮೃತರು ಹಾಗೂ ಆರೋಪಿಗಳು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಡಿಎಸ್ಪಿ ಸಂದೀಪ್ ವರ್ಮಾ ತಿಳಿಸಿದ್ದಾರೆ. ಸಂಬಂಧಿಕರು ಇನ್ನೂ ಕೆಲವು ಹೆಸರುಗಳನ್ನು ನೀಡಿದ್ದು, ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಎಲ್ಲಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.