ಕೊಳಚೆ ತುಂಬಿದ್ದ ಚರಂಡಿಗಳಿದು ನೀರು ಸ್ವಚ್ಛಗೊಳಿಸಿದ ಕೌನ್ಸಿಲರ್ !! | ಪ್ರತಿಯಾಗಿ ಆತನಿಗೆ ಹಾಲಿನ ಅಭಿಷೇಕ ಮಾಡಿದ ಬೆಂಬಲಿಗರು – ವೀಡಿಯೋ ವೈರಲ್

ಜನರನ್ನು ಮೆಚ್ಚಿಸಲು ಜನನಾಯಕರು ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಅಂತೆಯೇ ದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಕೌನ್ಸಿಲರ್, ಉದ್ಯಾನದಲ್ಲಿ ಕೊಳಚೆ ತುಂಬಿದ್ದ ಚರಂಡಿಗಿಳಿದು ನೀರನ್ನು ಸ್ವಚ್ಛಗೊಳಿಸಿದ ಪ್ರಸಂಗ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಸಾರ್ವಜನಿಕರು ಕೌನ್ಸಿಲರ್ ಅವರನ್ನು ಹಾಲಿನಲ್ಲೇ ಸ್ನಾನ ಮಾಡಿಸಿ ಗೌರವ ಸಲ್ಲಿಸಿದ ಘಟನೆ ನಡೆದಿದೆ.

ಪೂರ್ವ ದೆಹಲಿಯ ಕೌನ್ಸಿಲರ್ ಆಗಿರುವ ಹಸನ್ ಬಿಳಿ ಕುರ್ತಾ ಧರಿಸಿ ಎದೆ ಮಟ್ಟದವರೆಗೆ ತುಂಬಿಕೊಂಡಿದ್ದ ಚರಂಡಿಗೆ ಇಳಿದು ಅಲ್ಲಿನ ಕೊಳಚೆಯನ್ನು ಶುಚಿಗೊಳಿಸಿದರು. ಚರಂಡಿಯಲ್ಲಿ ತೇಲುತ್ತಿದ್ದ ತ್ಯಾಜ್ಯ ವಸ್ತುಗಳನ್ನು ಹಸನ್ ತೆಗೆದು ಹಾಕಿದ್ದಾರೆ. ಇದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ನಲ್ಲಿ ವೀಡಿಯೋ ಮಾಡಿದ್ದು, ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವರ ಸಹಾಯಕರು ಪಕ್ಕದಲ್ಲಿ ನಿಂತು ವಿವಿಧ ಉಪಕರಣಗಳನ್ನು ಕೊಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಚರಂಡಿ ಸ್ವಚ್ಛ ಮಾಡಿದ ನಂತರ ಹಸನ್ ಅವರ ಬೆಂಬಲಿಗರು ಅವರಿಗೆ ಹಾಲಿನಲ್ಲಿ ಸ್ನಾನ ಮಾಡಿಸಿದ್ದಾರೆ. ಈ ವಿಷಯ ವಿಧಾನಸಭೆಯಲ್ಲೂ ಚರ್ಚೆಯಾಗಿದೆ.

ಬಳಿಕ ಮಾತನಾಡಿರುವ ಹಸನ್, ಇಲ್ಲಿನ ಚರಂಡಿ ತುಂಬಿ ಹರಿಯುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಬಿಜೆಪಿ ಕೌನ್ಸಿಲರ್ ಮತ್ತು ಸ್ಥಳೀಯ ಶಾಸಕರು ಸಹಾಯ ಮಾಡಲಿಲ್ಲ. ಹೀಗಾಗಿ ನಾನೇ ಚರಂಡಿಗಿಳಿದು ಈ ಕೆಲಸ ಮಾಡಲು ಮುಂದಾದೆ ಎಂದು ಹೇಳಿದ್ದಾರೆ. ಬಾಲಿವುಡ್ ನಟ ಅನಿಲ್‌‌ ಕಪೂರ್ ಅಭಿನಯದ ನಾಯಕ್ ಚಿತ್ರದಲ್ಲೂ ಇದೇ ತರಹದ ದೃಶ್ಯವೊಂದನ್ನು ಹೆಣೆಯಲಾಗಿದೆ.

Leave A Reply

Your email address will not be published.