ಮಂಗಳೂರು: ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಿಳೆಯೊಬ್ಬರು ಹುಂಡಿಯ ಹಣವನ್ನೇ ಕದ್ದಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ರಾಜ್ಯದಲ್ಲೇ ಬಹುತೇಕ ಆಸ್ತಿಕರು ಭೇಟಿ ನೀಡುವ ತಾಣ ಮಂಗಳೂರು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಇಲ್ಲಿಯೇ ಈ ಘಟನೆ ನಡೆದಿರೋದು.
ಇಲ್ಲಿನ ಮಹಿಳಾ ಟ್ರಸ್ಟಿ ನಿವೇದಿತಾ ಶೆಟ್ಟಿ ಎಂಬುವವರ ಮೇಲೆ ಕದ್ದಿರುವ ಆರೋಪ ಕೇಳಿ ಬಂದಿದೆ.
ಫೆಬ್ರವರಿಯಲ್ಲಿ ನಡೆದಿರುವ ಈ ಪ್ರಕರಣ ಸಿಸಿಟಿವಿಯ ಸೆರೆಯಾಗಿದ್ದು, ಈಗ ವಿಚಾರ ಹಲವು ತಿರುವು ಪಡೆದುಕೊಂಡಿದೆ.
ಸ್ಥಳೀಯರು ಹಾಗೂ ದೇಗುಲದ ಭಕ್ತರು ಈ ಪ್ರಕರಣ ಕುರಿತು ಮೈಸೂರಿನ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು, ಮಂಗಳೂರು ಪೊಲೀಸ್ ಆಯುಕ್ತರಿಗೂ ದೂರನ್ನು ನೀಡಿದ್ದಾರೆ.
ವ್ಯವಸ್ಥಾಪನಾ ಸಮಿತಿ ಸದಸ್ಯೆ ತನ್ನ ಸ್ಥಾನದ ಜವಾಬ್ದಾರಿ ಮತ್ತು ಗೌರವಕ್ಕೆ ತಕ್ಕಂತೆ ನಡೆದುಕೊಳ್ಳದೆ ದುರಾಸೆಗೆ ಒಳಗಾಗಿ ದೇವಸ್ಥಾನದ ಹುಂಡಿ ಹಣ ಕದ್ದಿರುವುದು ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ವ್ಯವಸ್ಥಾಪನಾ ಸಮಿತಿ ಸದಸ್ಯೆ ಇಂತಹ ಅವ್ಯವಹಾರಕ್ಕೆ ಕೈಹಾಕಿರುವುದು ದೇವಸ್ಥಾನದ ಪ್ರತಿಷ್ಠೆಗೆ ಕಳಂಕ ತರುವ ವಿಷಯ. ಇಂತಹ ವ್ಯಕ್ತಿಗಳನ್ನು ದೇವಸ್ಥಾನದ ಕೆಲಸ ಕಾರ್ಯದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಕಳಂಕ ತಟ್ಟುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಈ ಪ್ರಕರಣ ಕುರಿತು ಟ್ರಸ್ಟಿಗಳು ಸಭೆ ನಡೆಸಿದ್ದು ಸಮಿತಿ ಸದಸ್ಯೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ತನಿಖೆ ಮುಂದುವರಿದಿದೆ.