ಆಗಸ್ಟ್‌ನಲ್ಲಿ ಕೋವಿಡ್ ನಾಲ್ಕನೇ ಅಲೆ ಸಾಧ್ಯತೆ, ಎಚ್ಚರ ಅಗತ್ಯ- ಸಚಿವ ಡಾ.ಕೆ.ಸುಧಾಕರ್

ಕೋವಿಡ್‌ ನಾಲ್ಕನೇ ಅಲೆ ಈ ವರ್ಷ ಆಗಸ್ಟ್‌ನಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದ್ದು, ಅದನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಜನತೆ ಹೆದರುವ ಅವಶ್ಯಕತೆಯಿಲ್ಲ. ಆದರೆ, ಕೋವಿಡ್‌-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೊಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಶಶೀಲ್‌ ಜಿ. ನಮೋಶಿ ಅವರು ಸೋಮವಾರ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರಿಸಿ, ಕೊರೊನಾದ ಬಿಎ-2 ಹೊಸ ಪ್ರಬೇಧ ಫಿಲಿಪ್ಪಿನ್ಸ್‌ ದೇಶದಲ್ಲಿ ಮೊದಲು ಪತ್ತೆಯಾಗಿದ್ದು, 40 ದೇಶಗಳಲ್ಲಿ ಕಂಡು ಬಂದಿದೆ. ಮೂರನೇ ಅಲೇ ಭಾರತದಲ್ಲಿ ಯಾವಾಗ ಬರಬಹುದು ಎಂದು ಹೇಳಿದ್ದ ಐಐಟಿ ಕಾನ್ಪುರ ಸಂಸ್ಥೆ, ನಾಲ್ಕನೆ ಅಲೆ ಆಗಸ್ಟ್‌ನಲ್ಲಿ ಭಾರತಕ್ಕೆ ಬರಬಹುದು ಎಂದಿದ್ದಾರೆ.

ಅದರಂತೆ, ನಾಲ್ಕನೆ ಅಲೆಯನ್ನು ತಡೆಗಟ್ಟಲು ಸರ್ಕಾರ ಸನ್ನದ್ಧವಾಗಿದ್ದು, ಹಿಂದಿನ ಅಲೆಗಳ ಸಂದರ್ಭದಲ್ಲಿ ಕಲಿತ ಅನುಭವಗಳಿಂದ ಈಗಾಗಲೇ ಹಲವಾರು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಮುಂದೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ನಮ್ಮ ಲಸೀಕಾಕರಣ ವ್ಯಾಪಕವಾಗಿದ್ದು, ನಾಲ್ಕನೇ ಅಲೆ ತಡೆಗಟ್ಟಲು ಬಹುಮಟ್ಟಿಗೆ ಸಹಾಯಕವಾಗಲಿದೆ ಎಂದರು.

ರಾಜ್ಯದಲ್ಲಿ ಮೊದಲ ಡೋಸ್‌ ಲಸಿಕೆ ಪಡೆದವರ ಪ್ರಮಾಣ ಶೇ.107ರಷ್ಟಿದೆ. 4.74 ಕೋಟಿ ಮೊದಲ ಡೋಸ್‌ ಲಸಿಕೆ ನೀಡಲಾಗಿದ್ದು, ಶೇ. 96 ರಷ್ಟು ಜನ ಎರಡು ಡೋಸ್‌ ಲಸಿಕೆ ಪಡೆದಿದ್ದಾರೆ. ಜೊತೆಗೆ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಈಗಾಗಲೇ 1.25 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಜೊತೆಗೆ, 56 ಸಾವಿರ ಆಕ್ಸಿಜನ್‌ ಬೆಡ್‌ಗಳಿವೆ, ಆಕ್ಸಿಜನ್‌ ಉತ್ಪಾದನಾ ಮತ್ತು ಸಂಗ್ರಹ ಸಾಮರ್ಥ್ಯ 300 ಮೆಟ್ರಿಕ್‌ ಟನ್‌ನಿಂದ 1,170 ಮೆಟ್ರಿಕ್‌ ಟನ್‌ಗೆ ಹೆಚ್ಚಿಸಲಾಗಿದೆ. 2.5 ಲಕ್ಷ ಕೋವಿಡ್‌ ಟೆಸ್ಟ್‌ ಸಾಮರ್ಥಯ ನಮ್ಮಲ್ಲಿದ್ದು, 265 ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವರು ವಿವರಿಸಿದರು.

ನಾಲ್ಕನೇ ಅಲೆ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಎಲ್ಲಾ ಸಿದ್ದತೆಗಳನ್ನೂ ಸಹ ಮಾಡಿಕೊಳ್ಳಲಾಗಿದೆ. ಜನತೆ ಭಯಪಡುವ ಅಗತ್ಯವಿಲ್ಲ. ಆದಾಗ್ಯೂ, ಕೋವಿಡ್‌ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಮುಖ್ಯವಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಈ ಕುರಿತು ಮುಖ್ಯಮಂತ್ರಿಯವ ಜೊತೆಗೂ ಚರ್ಚೆ ಮಾಡುವುದಾಗಿ ಸುಧಾಕರ್‌ ತಿಳಿಸಿದರು

Leave A Reply

Your email address will not be published.