ಉಡುಪಿ: ಹಿಜಾಬ್ ಪರವಾಗಿ ಕಿಡಿಗೇಡಿಗಳಿಂದ ಗೋಡೆ ಬರಹ !! | ಸ್ಥಳಕ್ಕೆ ಜಮಾಯಿಸಿದ ನೂರಾರು ಹಿಂದೂ ಕಾರ್ಯಕರ್ತರು, ದೂರು ದಾಖಲು

ಹಿಜಾಬ್ ಕುರಿತಾಗಿ ಈಗಾಗಲೇ ಹೈಕೋರ್ಟ್ ತನ್ನ ಆದೇಶ ಪ್ರಕಟಿಸಿದೆ. ಹಾಗಿದ್ದೂ ರಾಜ್ಯದಲ್ಲಿ ಹಿಜಾಬ್ ಕುರಿತಾದ ವಿವಾದ ಮುಗಿದಿಲ್ಲ. ಇದೀಗ ಹಿಜಾಬ್ ಪರವಾಗಿ ಕೆಲವೊಂದು ಕಿಡಿಗೇಡಿಗಳು ಮಲ್ಪೆ ಸಮೀಪದ ಬೈಲಕೆರೆ ಎಂಬಲ್ಲಿ ಗೋಡೆ ಬರಹವನ್ನು ಬರೆದಿರುವುದು ಪತ್ತೆಯಾಗಿದೆ.

ನ್ಯಾಯಾಲಯ ಹಿಜಾಬ್ ವಿರುದ್ಧ ಆದೇಶ ನೀಡಿದ ಬೆನ್ನಲ್ಲೇ ಮಲ್ಪೆ ಸಮೀಪದ ಬೈಲಕೆರೆ ಎಂಬಲ್ಲಿ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಹಿಜಾಬ್‌ ಪರವಾಗಿ ಗೋಡೆ ಬರಹ ಪತ್ತೆಯಾಗಿದ್ದು, ಮಾಹಿತಿ ತಿಳಿದು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುವವರನ್ನು ಬಂಧಿಸುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಕೂಡಲೇ ಭೇಟಿ ನೀಡಿದ ವೃತ್ತ ನಿರೀಕ್ಷಕ ಶರಣಬಸವ ಪಾಟೀಲ್‌ ಹಾಗೂ ಮಲ್ಪೆ ಠಾಣಾಧಿಕಾರಿ ಸಕ್ತಿವೇಲು ಹಿಂದೂ ಕಾರ್ಯಕರ್ತರ ಮನವೊಲಿಸಿ ಸ್ಥಳದಿಂದ ತೆರಳುವಂತೆ ಮನವೊಲಿಸಿದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave A Reply

Your email address will not be published.