ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ |

ಸಾಲದ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಹಾಸನದಲ್ಲಿ ನಡೆದಿದೆ.

ಮೃತನ ಹೆಸರು ಅಂಬರೀಶ್ ಎಂಬುದಾಗಿದ್ದು, ಹಾಸನದ ಉದಯಗಿರಿಯ ನಿವಾಸಿ. ಭಾನುವಾರ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ವೀಡಿಯೋ ಮಾಡಿ ಕಾರಣ ತಿಳಿಸಿದ್ದಾರೆ.

ನನ್ನ ಸಾವಿಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಮುಖ್ಯವಾಗಿ ಈ ವೀಡಿಯೋದಲ್ಲಿ ಹೇಳಿದ್ದಾರೆ.

ಮೀಟರ್ ಬಡ್ಡಿ ದಂಧೆಗೆ ಮನನೊಂದು ಈ ರೀತಿಯ ನಿರ್ಧಾರಕ್ಕೆ ಈ ವ್ಯಕ್ತಿ ಬಂದಿದ್ದಾರೆಂದು ಶಂಕಿಸಲಾಗಿದೆ. ವೀಡಿಯೋದಲ್ಲಿರುವಂತೆ ನರೇಂದ್ರ, ರಾಜಪ್ಪ, ಸತ್ಯಮಂಗಲದ ಜಗ ಎಂಬವರಿಗೆ ಚೆಕ್‍ಗಳಿಗೆ ನಾನು ಸಹಿ ಹಾಕಿ ಕೊಟ್ಟಿದ್ದು, ಕೊರೊನಾ ಬರುವ ಮುಂಚೆಯಿಂದ ವ್ಯವಹಾರ ಮಾಡಿದ್ದೆ. ಎಲ್ಲರೊಂದಿಗೆ ಬಡ್ಡಿ ಕೊಟ್ಟಿದ್ದೇನೆ. ನನ್ನ ಇನ್‍ವಾಯ್ಸ್, ಬ್ಯುಸಿನೆಸ್ ನೋಡಿ ಅವರು ಸಾಲ ಕೊಟ್ಟಿದ್ದರು ಎಂದಿದ್ದಾರೆ.

ನನ್ನ ಹೆಂಡ್ತಿಯ ಸಹಿಮಾಡಿ ಕೊಟ್ಟಿದ್ದೇನೆ ಅದೊಂದು ಮೋಸ ಮಾಡಿದ್ದೇನೆ. ನರೇಂದ್ರ, ಡಿಜಿಪಿ ಧರ್ಮೆಂದ್ರ ಅವರಿಗೆ ಹೇಳಿ ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ. 18-20 ಚೆಕ್‍ಗಳು, ದಾಖಲೆಗಳನ್ನು ಕೊಡುತ್ತಿಲ್ಲ. 3 ಲಕ್ಷ ಸಾಲಕ್ಕೆ ಬಡ್ಡಿ 13 ಲಕ್ಷ ಆಗಿದೆ ಎಂದು ಎಲ್ಲರು ಕೇಸ್‍ಗಳನ್ನು ಹಾಕುತ್ತಿದ್ದಾರೆ ಎಂದು ವಿಷದ ಬಾಟ್ಲಿ ಇಟ್ಟುಕೊಂಡು ಕಣ್ಣೀರಿಟ್ಟು ಅಂಬರಿಶ್ ವೀಡಿಯೋ ಮಾಡಿದ್ದಾರೆ.

ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.