KPSC : 362 ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ ಸಕ್ರಮಕ್ಕೆ ರಾಜ್ಯಪಾಲರ ಅಂಕಿತ! ಸರಕಾರದಿಂದ ರಾಜ್ಯಪತ್ರ ಬಿಡುಗಡೆ

ಬೆಂಗಳೂರು: ‘ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಮಸೂದೆ-2022’ ಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಈ ಮೂಲಕ ಎಂಟು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ಈ ಆಯ್ಕೆಪಟ್ಟಿಗೆ ಅಂಗೀಕಾರ ದೊರಕಿದಂತಾಗಿದೆ.

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳ ನೇಮಕಾತಿಗೆ ಸಿಂಧುತ್ವದ ಮುದ್ರೆ ಒತ್ತಲು ರಾಜ್ಯ ಸರ್ಕಾರ ಇದನ್ನು ಸಿದ್ಧಪಡಿಸಿತ್ತು.

ಎಂಟು ವರ್ಷಗಳಿಂದ ಅಕ್ರಮ, ಭ್ರಷ್ಟಾಚಾರದ ಆರೋಪಗಳ ಸುಳಿಗೆ ಸಿಲುಕಿ ತನಿಖೆ, ವಿಚಾರಣೆಗೆ ಒಳಗಾಗಿ, ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಅತಂತ್ರ ಸ್ಥಿತಿಯಲ್ಲಿದ್ದ ಈ ಆಯ್ಕೆ ಪಟ್ಟಿಯನ್ನು ಕಾಯ್ದೆಯ ಮೂಲಕ ಸಕ್ರಮಗೊಳಿಸಲು ಕಳೆದ ಅಧಿವೇಶನದಲ್ಲಿ ಸರ್ಕಾರ ಮಸೂದೆ ಮಂಡಿಸಿತ್ತು.

ಚರ್ಚೆ ಇಲ್ಲದೆ ಈ ಮಸೂದೆಯನ್ನು ಅಂಗೀಕಾರ ಮಾಡಲಾಯಿತು. ಇದೀಗ, ಮಸೂದೆಗೆ ರಾಜ್ಯಪಾಲರು ಅಂಕಿತ ಬಿದ್ದಿರುವುದರಿಂದ, ಸರ್ಕಾರ ಅದರ ರಾಜ್ಯಪತ್ರ ಹೊರಡಿಸಿದೆ.

Leave A Reply

Your email address will not be published.