ಹಿಜಾಬ್ ಕುರಿತು ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಪರೀಕ್ಷೆ ಬಿಟ್ಟು ಹೊರ ನಡೆದ ವಿದ್ಯಾರ್ಥಿನಿಯರು !!

ಹಿಜಾಬ್ ಸಂಬಂಧ ಹೈಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ. ತೀರ್ಪು ಹೊರ ಬೀಳುತ್ತಿದ್ದಂತೆಯೇ ಯಾದಗಿರಿಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬಿಟ್ಟು ಮನೆಗೆ ತೆರಳಿದ್ದಾರೆ.

ಹಿಜಾಬ್ ತೆಗೆಯದೆ ಬೆಳಗ್ಗೆಯಿಂದ ಕೋರ್ಟ್ ಆದೇಶಕ್ಕೆ ಕಾದು ಕುಳಿತಿದ್ದ ವಿದ್ಯಾರ್ಥಿನಿಯರು ತೀರ್ಪು ಪ್ರಕಟವಾಗುತ್ತಿದ್ದಂತೆಯೇ ದ್ವಿತೀಯ ಪಿಯುಸಿ ಪೂರ್ವಭಾವಿ ಪರೀಕ್ಷೆ ಬಿಟ್ಟು ಹೊರಕ್ಕೆ ನಡೆದಿದ್ದಾರೆ. ಹಿಜಾಬ್ ಬಿಟ್ಟು ಕ್ಲಾಸ್‍ಗೆ ಬರಲ್ಲ ಎಂದು ಪರೀಕ್ಷೆ ಬಿಟ್ಟು 8 ವಿದ್ಯಾರ್ಥಿಗಳು ಮನೆಗೆ ಹೋಗಿದ್ದಾರೆ.

ಬಳಿಕ ನಗರದ ಜ್ಯೂನಿಯರ್ ಪಿಯು ಕಾಲೇಜು ವಿದ್ಯಾರ್ಥಿನಿಯೋರ್ವಳು ಮಾಧ್ಯಮದವರೊಂದಿಗೆ ಮಾತನಾಡಿ, ಹೈಕೋರ್ಟ್ ಆದೇಶ ಬಂದರೂ ನಾವು ಹಿಜಾಬ್ ಧರಿಸುತ್ತೇವೆ, ನಮಗೆ ಶಿಕ್ಷಣ ಹಾಗೂ ಹಿಜಾಬ್ ಕೂಡ ಮುಖ್ಯವಾಗಿದೆ. ನಾವು ಹಿಜಾಬ್ ತೆಗೆಯಲ್ಲ. ಹಿಜಾಬ್ ಧರಿಸಿ ಪೂರಕ ಪರೀಕ್ಷೆ ಬರೆಯುತ್ತೇವೆ. ಹಿಜಾಬ್ ತೆಗೆದು ಪರೀಕ್ಷೆ ಬರೆಯಬೇಕೆಂದರೆ ನಾವು ಪರೀಕ್ಷೆ ಬರೆಯಲ್ಲ, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕೆಂಬಾವಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮಾತನಾಡಿ, ನಾವು ಕೋರ್ಟ್ ಆದೇಶ ಪಾಲಿಸಿ ಅಂತ ಹೇಳಿದ್ದೇವೆ. ಬಹಳಷ್ಟು ಮನವೋಲಿಸಿದರೂ ವಿದ್ಯಾರ್ಥಿನಿಯರು ನಮ್ಮ ಮಾತು ಕೇಳಲಿಲ್ಲ. ಹಿಜಾಬ್ ಹಾಕೊಂಡೇ ಬರುವುದಾಗಿ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಅವರು ಕ್ಲಾಸ್ ಬಿಟ್ಟು ಹೋಗಿದ್ದಾರೆ ಎಂದರು.

Leave A Reply

Your email address will not be published.