ಸ್ವಾತಂತ್ರ‍್ಯ ಹೋರಾಟದ ಮಜಲುಗಳ ಸ್ಮರಣೆ ರಾಷ್ಟ್ರ ನಿರ್ಮಾಣದ ಕಾರ್ಯ: ರಾಜೇಶ್ ಪದ್ಮಾರ್

ಪುತ್ತೂರು : ಅನೇಕ ಯುವಕರಲ್ಲಿ ಸ್ವಾತಂತ್ರ‍್ಯದ ಕುರಿತಾದ ವಿಚಾರಗಳು ನಮಗೆ ಸಂಬಂಧಿಸಿದ್ದಲ್ಲ ಎಂಬ ಮನೋಭಾವವಿದೆ. ನಮ್ಮ ಪಠ್ಯಪುಸ್ತಕಗಳು ಸ್ವಾತಂತ್ರ‍್ಯದ ಕುರಿತಾಗಿ ಸರಿಯಾಗಿ ತಿಳಿಸುವಲ್ಲಿ ಎಡವಿರುವುದು ಇದಕ್ಕೆ ಪ್ರಮುಖ ಕಾರಣ. ಇಂದಿನ ಯುವಪೀಳಿಗೆಗೆ ರಾಷ್ಟ್ರದ ಕುರಿತಾದ ವಿಚಾರಗಳನ್ನು ಅವರ ಮಾನಸಿಕತೆಗೆ ತಕ್ಕಂತೆ ನೀಡಿವ ಕಾರ್ಯ ನಮಗಿರುವ ಬಹುದೊಡ್ಡ ಸವಾಲು. ಹಾಗೆಯೇ ಸಮಾಜವನ್ನು ಒಗ್ಗೂಡಿಸುವ ಆಲೋಚನೆಗಳು ಜೊತೆಯಾದಾಗ ದೊರೆತ ಸ್ವಾತಂತ್ರ‍್ಯವನ್ನು ಕಾಪಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಥನ ಪುತ್ತೂರು – ವೈಚಾರಿಕ ವೇದಿಕೆ ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ೭೫ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾದ ‘ನನ್ನ ಭಾರತ- ಸಮರ್ಥ ಭಾರತ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆದಿತ್ಯವಾರ ಮಾತನಾಡಿದರು.
ಭಾರತ ಸ್ವಾತಂತ್ರ‍್ಯ ಹೋರಾಟವನ್ನು ಎದುರಿಸಿದ ರೀತಿ ಮತ್ತು ಜಗತ್ತಿನ ಇತರೆ ದೇಶಗಳು ಸ್ವಾತಂತ್ರ‍್ಯ ಹೋರಾಟವನ್ನು ಎದುರಿಸಿದ ರೀತಿ ವಿಭಿನ್ನವಾದದ್ದು. ನಮ್ಮ ರಾಷ್ಟ್ರದ ಹೋರಾಟ ಅಖಿಲ ಭಾರತ ಮಟ್ಟದಲ್ಲಿ ವ್ಯಾಪಿಸಿತ್ತು. ಭಾರತದ ಸ್ವಾತಂತ್ರ್ಯ ಹೋರಾಟ ಕ್ರಾಂತಿಕಾರಿ ಮಾರ್ಗ, ಅಹಿಂಸಾತ್ಮಕ ಮಾರ್ಗ, ಸಾಹಿತ್ಯದ ಮಾರ್ಗ, ಸಮಾಜ ಸುಧಾರಣೆ ಮತ್ತು ಮಹಿಮಾನ್ವಿತರ ಮಾರ್ಗದರ್ಶನ ಮುಂತಾದ ಬಹುಮುಖಗಳನ್ನು ಹೊಂದಿದೆ. ಭಾರತದ ಕ್ರಾಂತಿಕಾರಿ ಪರಂಪರೆ ಜಗತ್ತಿನ ಗಮನ ಸೆಳೆದಿದ್ದಲ್ಲದೆ ನಮ್ಮ ನಾಡಿನಲ್ಲಿ ಸ್ವಾತಂತ್ರ್ಯದ ನಂತರವು ಶೌರ್ಯ- ತ್ಯಾಗದ ಪರಂಪರೆ ಮುಂದುವರಿಸುವುದಕ್ಕೆ ಸಹಕರಿಸಿದೆ. ಅಹಿಂಸಾತ್ಮಕ ಹೋರಾಟದ ಮೂಲಕ ಜನರ ಮನಸನ್ನು ತಯಾರು ಮಾಡುವ ಕಾರ್ಯ ಅಂದು ಯಶಸ್ವಿಯಾಯಿತು. ಹಾಗೆಯೇ ಹೋರಾಟದ ಛಾಪನ್ನು ಅಕ್ಷರರೂಪಕ್ಕೆ ಇಳಿಸಿ ಸಾಹಿತ್ಯಾತ್ಮಕ ಹೋರಾಟ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ನಡೆಯಿತು. ಈ ಎಲ್ಲಾ ಮಾರ್ಗಕ್ಕೂ ಮಹಾನ್ ಸಂತರ ಮಾರ್ಗದರ್ಶನ ಕಾಲಕಾಲಕ್ಕೆ ಒದಗಿ ಬಂದಿದೆ ಎಂದರು.

ಭಾರತ ಸರ್ವರಂಗದಲ್ಲೂ ಅತ್ಯಂತ ಶ್ರೀಮಂತವಾದ ದೇಶ. ಸಾವಿರಾರು ವರ್ಷಗಳ ಸಂಘರ್ಷದ ಇತಿಹಾಸದ ನಂತರವೂ ಭಾರತ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅಂತಹ ಪವಿತ್ರವಾದ ನಾಡಿನ ಗತವೈಭವದ ಸ್ಮರಣೆಯನ್ನು ಇಂದಿನ ಯುವಪೀಳಿಗೆ ಮಾಡಬೇಕು. ಪ್ರತಿಯೊಂದು ಕಾಲಘಟ್ಟದಲ್ಲಿಯೂ ಎಲ್ಲಾ ರಾಷ್ಟçಗಳಿಗೆ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ವರ್ತಮಾನ ಸಮಾಜದಲ್ಲಿರುವ ತಲ್ಲಣಗಳ ಅರಿವು ಆ ನಾಡಿನ ಯುವಕರಲ್ಲಿರಬೇಕು. ಯುವಕರು ಈ ರಾಷ್ಟ್ರದ ಭವಿಷ್ಯದ ಕುರಿತು ಚಿಂತನ-ಮಂಥನ ಮಾಡಬೇಕು. ಯುವಕರು ಸ್ವಭೂಷ, ಸ್ವಭಾಷಾ, ಸ್ವದೇಶಿ ಹಾಗೂ ಸ್ವರಾಜ್ಯದ ಕುರಿತಾದ ಅಧ್ಯಯನದ ಮೂಲಕ ರಾಷ್ಟ್ರದಲ್ಲಿರುವ ಗೊಂದಲಗಳಿಗೆ ಪರಿಹಾರವನ್ನು ಸೂಚಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿಯ ಸುದ್ದಿ ಬಿಡುಗಡೆ ಮತ್ತು ಸುದ್ದಿ ನ್ಯೂಸ್‌ನ ಸಿ.ಇ.ಒ ಸಿಂಚನಾ ಊರುಬೈಲ್ ಮಾತನಾಡಿ, ಸಮರ್ಥ ಭಾರತದ ನಿರ್ಮಾಣ ಪ್ರಜಾಪ್ರಭುತ್ವದ ಮೂಲಕ ಸಾಧ್ಯ. ಸಮಾಜದಲ್ಲಿರುವ ಪಿಡುಗುಗಳನ್ನು ಹೋಗಲಾಡಿಸಿದರೆ ಸದೃಢ ಭಾರತದ ನಿರ್ಮಾಣವಾಗುತ್ತದೆ. ರಾಷ್ಟ್ರನಿರ್ಮಾಣದ ಕಾರ್ಯ ಸ್ವಗ್ರಾಮ ಸಬಲವಾಗುವುದರ ಮೂಲಕ ಆಗಬೇಕು. ಪ್ರಜಾಪ್ರಭುತ್ವ ನೀಡಿರುವ ಸ್ವಾತಂತ್ರ್ಯವನ್ನು ದುರುಪಯೋಗಗೊಳಿಸದೆ, ನಾಡಿನ ಪ್ರತಿಯೊಬ್ಬರು ತಮ್ಮ ಊರಿನ ಏಳಿಗೆಗಾಗಿ ಪಣತೊಡಬೇಕು ಎಂದು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸದ ನಂತರದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯೆ ಡಾ.ಅನುಪಮಾ ರವಿ ಪ್ರಾರ್ಥಿಸಿದರು. ಮಂಥನ ಪುತ್ತೂರು – ವೈಚಾರಿಕ ವೇದಿಕೆಯ ಸಂಯೋಜಕರಾದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಸ್ವಾಗತಿಸಿ, ಫಾದರ್ ಮುಲ್ಲರ್ ಕಾಲೇಜಿನ ಪ್ರಾಂಶುಪಾಲ ಡಾ. ಅಖಿಲೇಶ್ ಪಾಣಾಜೆ ವಂದಿಸಿದರು. ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಹರಿಪ್ರಸಾದ್ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave A Reply

Your email address will not be published.