ಮಂಗಳೂರು: ಬೈಕ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ | ಅಪಘಾತದ ತೀವ್ರತೆಗೆ ಟ್ಯಾಂಕರ್ ಅಡಿಗೆ ಸಿಲುಕಿದ ಬೈಕ್ ಸವಾರ | ಒಂದೂವರೆ ಗಂಟೆ ಕಾರ್ಯಾಚರಣೆ ಬಳಿಕ ಯುವಕ ಪಾರು !!

ಬೈಕ್ ಹಾಗೂ ಟ್ಯಾಂಕರ್ ನಡುವಿನ ಭೀಕರ ಅಪಘಾತದಲ್ಲಿ ಬೈಕ್ ಸವಾರ ಪವಾಡ ಸದೃಶವಾಗಿ ಪಾರಾದ ಘಟನೆ ಮಂಗಳೂರು ನಗರ ಹೊರ ವಲಯದ ಗುರುಪುರದಲ್ಲಿ ನಡೆದಿದೆ.

ಗುರುಪುರ ನಿವಾಸಿ ಮನೀಶ್ ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.

ಗುರುಪುರದ ಬಂಡಸಾಲೆ ಎಂಬಲ್ಲಿ ಘಟನೆ ನಡೆದಿದೆ. ಬೈಕ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದು ಅಪಘಾತ ಈ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಬೈಕ್ ಸವಾರ ಟ್ಯಾಂಕರ್ ಅಡಿಗೆ ಸಿಲುಕಿಕೊಂಡಿದ್ದ. ಸುಮಾರು ಒಂದೂವರೆ ತಾಸು ಸಿಲುಕಿದ್ದ ಸವಾರನನ್ನು ಕಾರ್ಯಾಚರಣೆ ನಡೆಸಿ ಟ್ಯಾಂಕರ್ ಅಡಿಯಿಂದ ಮೇಲೆತ್ತಲಾಗಿದೆ. ಬೈಕ್ ಸವಾರ ಪವಾಡ ಸದೃಶ ಅಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿದೆ.

ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಬಜ್ಪೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.