6 ವರ್ಷದ ಹಿಂದೆ ಸಂತೆಯಲ್ಲಿ ಕಳೆದುಹೋಗಿದ್ದ ಮೂಗ ಮಗ ಕೊನೆಗೂ ತಾಯಿ ಮಡಿಲಿಗೆ !! | ಮಗನನ್ನು ತಾಯಿ ಬಳಿ ಸೇರಿಸಲು ಸೇತುವೆಯಾದ ಆಧಾರ್ ಕಾರ್ಡ್

ತಾಯಿ ಮಗುವಿನ ಸಮ್ಮಿಲನವನ್ನು ನೋಡುವುದೇ ಚಂದ. ಅದರಲ್ಲೂ ಇಲ್ಲಿ ಆರು ವರ್ಷಗಳ ಬಳಿಕ ತಾಯಿ ಮಗ ಒಂದಾಗಿದ್ದು, ಆ ಕ್ಷಣ ಎಂತಹವರನ್ನೂ ಭಾವುಕರನ್ನಾಗಿ ಮಾಡಿದೆ. ಹೌದು. 6 ವರ್ಷಗಳ ಹಿಂದೆ ಸಂತೆಯಲ್ಲಿ ತನ್ನ ಹೆತ್ತ ತಾಯಿಯಿಂದ ಬೇರ್ಪಟ್ಟಿದ್ದ ಮಗನನ್ನು ಆಧಾರ್ ಕಾರ್ಡ್ ಡೀಟೇಲ್ಸ್ ಒಂದು ಮಾಡಿದೆ!!

2016ರಲ್ಲಿ ಬೆಂಗಳೂರಿನ ಸಂತೆಯಲ್ಲಿ ತರಕಾರಿ ಮಾರಾಟ ಮಾಡುವ ವೇಳೆ ಸಿಂಗನಾಯಕನಹಳ್ಳಿಯ ಪಾರ್ವತಮ್ಮ ಅವರು ಮಗ ಭರತ್‌ನನ್ನು ಕಳೆದುಕೊಂಡಿದ್ದರು. ಸಂತೆಯಲ್ಲಿ ನಾಪತ್ತೆಯಾದ ಮಗನಿಗಾಗಿ ತಾಯಿ ಬಹಳ ಹುಡುಕಾಟ ನಡೆಸಿದ್ದರು. ಎಷ್ಟೋ ದೇವರಿಗೆ ಹರಕೆ ಹೊತ್ತಿದ್ದರು. ನಿತ್ಯ ಮಗನಿಗಾಗಿ ತಾನು ಕಾಯುತ್ತಲೇ ಇದ್ದರು. ಇದೀಗ ಆಧಾರ್ ಕಾರ್ಡ್ ಮೂಲಕ ತಾಯಿ ಮಡಿಲಿಗೆ ಮಗ ಸೇರಿದ್ದು, ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.

ಯಲಹಂಕದ ಸಂತೆಯಲ್ಲಿ ತಪ್ಪಿಸಿಕೊಂಡ ಭರತ್, ಮಹಾರಾಷ್ಟ್ರದ ನಾಗಪುರ ರೈಲು ನಿಲ್ದಾಣ ಸೇರಿದ್ದ. ಭರತ್ ನನ್ನು ರಕ್ಷಿಸಿ ಪುನರ್ ವಸತಿ ಕೇಂದ್ರಕ್ಕೆ ರೈಲ್ವೆ ಅಧಿಕಾರಿಗಳು ತಲುಪಿಸಿದ್ದರು. ಮಾತು ಬಾರದ ಭರತ್ ಅಲ್ಲೇ ನೆಲೆಸಿದ್ದ. ಈ ಬಗ್ಗೆ ಯಾವ ಮಾಹಿತಿಯೂ ಇಲ್ಲದ ಪಾರ್ವತಮ್ಮ, ಮಗ ಕಾಣೆಯಾಗಿದ್ದಾನೆ ಎಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಾಗ್ಪುರದ ಪುನರ್ ವಸತಿ ಕೇಂದ್ರದಲ್ಲೇ 6 ವರ್ಷಗಳಿಂದ ಆಶ್ರಯ ಪಡೆದಿದ್ದ ಭರತ್‌ಗೆ 2022ರಲ್ಲಿ ಆಧಾರ್ ಕಾರ್ಡ್ ಮಾಡಿಸಲು ಆಧಾರ್ ಸೇವಾ ಕೇಂದ್ರಕ್ಕೆ ಭರತ್ ನನ್ನು ಅಧಿಕಾರಿಗಳು ಕರೆದೊಯ್ದಿದ್ದರು. ಈ ವೇಳೆ ಬೆರಳಚ್ಚು ಪಡೆದಾಗ ಹೊಸ ಆಧಾರ್ ಕಾರ್ಡ್‌ಗೆ ರಿಜೆಕ್ಟ್ ತೋರಿಸಿತ್ತು. ಭರತ್ ಬೆರಳಚ್ಚಿನಿಂದ ಆಧಾರ್ ಕಾರ್ಡ್ ತೆಗೆದುಕೊಂಡಿದ್ದ ಅಧಿಕಾರಿಗಳಿಗೆ ಈತ ಬೆಂಗಳೂರು ಮೂಲದವ ಎಂದು ಗೊತ್ತಾಗಿದೆ.

ಈ ಬಗ್ಗೆ ಅಡ್ರೆಸ್ ನೋಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪುನರ್ ವಸತಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅಲ್ಲಿಂದ ಯಲಹಂಕ ಪೊಲೀಸರಿಗೆ ಮಾಹಿತಿ ಬಂದಿತ್ತು. ಕೂಡಲೇ ಭರತ್‌ನ ತಾಯಿ ಪಾರ್ವತಮ್ಮ ನನ್ನು ಪತ್ತೆ ಹಚ್ಚಿದ ಯಲಹಂಕ ಪೊಲೀಸರು ನಾಗ್ಪುರಕ್ಕೆ ಕರೆದೊಯ್ದಿದ್ದರು. ಈ ವೇಳೆ ಮಗನನ್ನು ಕಂಡು ಭಾವುಕರಾದ ತಾಯಿ ಭರತ್‌ನನ್ನು ತಬ್ಬಿ ಮುದ್ದಾಡಿದ ಈ ಭಾವುಕ ಕ್ಷಣ ಕಂಡು ಪೊಲೀಸರು ಮತ್ತು ಅಧಿಕಾರಿಗಳು ಕೂಡ ಭಾವುಕರಾಗಿದ್ದರು. ಮಗ ತಾಯಿ ಮಡಿಲಿಗೆ ಸೇರುವಂತೆ ಮಾಡಿದ ಆಧಾರ್ ಕಾರ್ಡ್ ಮತ್ತು ಇಂತಹ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಿದವರಿಗೂ ಪಾರ್ವತಮ್ಮ ಧನ್ಯವಾದ ತಿಳಿಸಿದ್ದಾರೆ.

Leave A Reply

Your email address will not be published.