ಓಡಿ ಹೋಗಿ ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಸಂಧಾನಕ್ಕೆಂದು ಕರೆದು, ಅಳಿಯನಿಗೆ ಚಾಕು ಹಾಕಿದ ಮನೆಯವರು !

ಚೆಲುವಿನ ಚಿತ್ತಾರ ಸಿನಿಮಾ ಯಾರು ನೋಡಿಲ್ಲ ಹೇಳಿ. ಎಲ್ಲರೂ ನೋಡಿರುತ್ತಾರೆ. ಅದ್ಭುತ ಅಭಿನಯದಿಂದ ಮನಸೂರೆಗೊಂಡ ಸಿನಿಮಾ ಅದು. ಇಬ್ಬರು ಪ್ರೇಮಿಗಳು ಮನೆ ಬಿಟ್ಟು ಬರ್ತಾರೆ. ಸಂಧಾನಕ್ಕೆ ಅಂತ ಕರೆಸಿಕೊಂಡ‌ ಮನೆಯವರು ಇಬ್ಬರನ್ನು ದೂರ ದೂರ ಮಾಡುತ್ತಾರೆ. ಆ ತರಹದೇ ಒಂದು ಕಥೆ ಇಲ್ಲಿ ನಿಜ ಜೀವನದಲ್ಲಿ ನಡೆದಿದೆ.

ಹುಡುಗಿ ಹೆಸರು ಸುಶ್ಮಿತಾ. ಇವನ ಹೆಸರು ಪ್ರೀತಂ. ಕಲಬುರಗಿ ಮೂಲದ ಜೋಡಿ ಇದು. ಪ್ರೀತಂ ಸಹೋದರಿ ಡೇಸಿ ಬಳಿ ಸುಶ್ಮಿತಾ ಟ್ಯೂಷನ್ ಗೆ ಬರ್ತಿದ್ಳು. ಈ ಸಮಯದಲ್ಲಿ ಇಬ್ಬರಿಗೂ ಪ್ರೇಮ ಶುರುವಾಗಿದೆ. ಆದರೆ ಈ ವಿಷಯ ಸುಶ್ಮಿತಾ ಮನೆಯವರಿಗೆ ತಿಳಿಯುತ್ತಿದ್ದಂತೆ ವಿರೋಧ ವ್ಯಕ್ತವಾಗಿದೆ. ಕಳೆದ ವರ್ಷ ಇಬ್ಬರೂ ಬೀದರ್ ನಲ್ಲಿ ಮದುವೆಯಾಗಿ, ಬೆಂಗಳೂರಿಗೆ ಓಡಿ ಹೋಗಿ ವಾಸವಿದ್ದರು. ಈ ವೇಳೆ ಒಂದು ದಿನ ಫೋನ್ ಮಾಡಿದ ಮಧ್ಯವರ್ತಿ ಮೆಹಬೂಬ್ ಇಬ್ಬರ ಮಧ್ಯೆ ಸಂಧಾನದ ಮಾತನಾಡಿದ್ದಾರೆ‌. ಹೀಗಾಗಿ ಮೆಹಬೂಬ್ ಮಾತು ನಂಬಿ ಕಲಬುರಗಿಗೆ ಬಂದಿದ್ದಾರೆ ಪ್ರೇಮಿಗಳು. ಮನೆಯವರಿಗೆ ಸರ್ಪೈಸ್ ಕೊಡೋಣ ಅಂತಾ ಈ ಜೋಡಿ ತಿಳಿದುಕೊಂಡಿದ್ದರಂತೆ.

ಸಂಧಾನಕ್ಕೆ ಅಂತ ಕರೆದ ಮೆಹಬೂಬ್ ಪ್ರೀತಂಗೆ ಮುಹೂರ್ತ ಇಟ್ಟಿದ್ದಾನೆ. ಮಾರ್ಚ್ 3 ರಂದು ಮೆಹಬೂಬ್ ನನ್ನು ಭೇಟಿಯಾದ ಪ್ರೀತಂ ನಂತರ ಮನೆಗೆ ಬಂದಿದ್ದಾನೆ. ಇದಾದ ನಂತರ ಮನೆಯವರನ್ನು ಬಿಡೋಕೆ ರೈಲ್ವೇ ಸ್ಟೇಷನ್ ಗೆ ಹೋಗಿ ವಾಪಸ್ ಬರಬೇಕಾದರೆ ಕಾದು ಕುಳಿತಿದ್ದ ಹುಡುಗಿ ಮನೆಯವರು ಪ್ರೀತಂ ಹೊಟ್ಟೆಗೆ ಚಾಕು ಹಾಕಿ ಕೊಲೆ ಮಾಡಿದ್ದಾರೆ.

ಮರ್ಯಾದೆಗೆ ಹೆದರಿದ ಸುಶ್ಮಿತಾಳ ಮನೆಯವರು ತಾಳ್ಮೆ ಕಳೆದುಕೊಂಡು ಅಳಿಯನನ್ನೇ ಬರ್ಬರವಾಗಿ ಕೊಲೆಗೈದು ಜೈಲು ಸೇರಿದ್ದಾರೆ. ಇದೀಗ ಈ ಕೊಲೆ ಸಂಬಂಧಪಟ್ಟಂತೆ ಯುವತಿಯ ಚಿಕ್ಕಪ್ಪ ಅರವಿಂದ ಡೆಂಕಿ, ಅಜ್ಜ ಶಿವಪುತ್ರಪ್ಪ ಡೆಂಕಿ, ಮೆಹಬೂಬ್ ಮಂಜೂರು ಅಲಿಶೆಕ್ ಮತ್ತು ಮದನ್ ಗೋಪಾಲ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಚಿಕ್ಕವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಸುಶ್ಮಿತಾ ಕಣ್ಣೀರು ಹಾಕುತ್ತಿದ್ದಾಳೆ.

Leave A Reply

Your email address will not be published.