ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ತಲಾಖ್ !! | ಪಕ್ಷ ತೊರೆದ ಹಿರಿಯ ಮುಖಂಡರಾದ ಸಿಎಂ ಇಬ್ರಾಹಿಂ, ರೋಷನ್ ಬೇಗ್

ಇಂದು ರಾಜೀನಾಮೆ ಕೊಡುತ್ತೇನೆ.. ನಾಳೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಕೊಂಡು ಬಂದಿದ್ದ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಅದಲ್ಲದೆ ಅವರೊಂದಿಗೆ ಇನ್ನೊಬ್ಬ ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಕೂಡ ರಾಜೀನಾಮೆ ನೀಡಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ, ವಿಧಾನ ಪರಿಷತ್ ಸ್ಥಾನಕ್ಕೆ ಸಹ ಇಂದೇ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯಗೆ ಕಳುಹಿಸುತ್ತೇನೆ ಎಂದು ತಿಳಿಸಿದರು.

ಸ್ವಾಭಿಮಾನ ಹಾಗೂ ರಾಜ್ಯದ ಹಿತ ದೃಷ್ಡಿಯಿಂದ ಈ ರಾಜೀನಾಮೆ ಅನಿವಾರ್ಯವಾಗಿದೆ. ಕಾಂಗ್ರೆಸ್‌ನಲ್ಲಿ ಸ್ವಾಭಿಮಾನ ಉಳಿಸಿಕೊಂಡು ಇರಲು ಸಾಧ್ಯವಿಲ್ಲ. 1994ರಲ್ಲಿ ಆದ ರಾಜಕೀಯ ಸ್ಥಿತಿ 2022ರಲ್ಲೂ ಆಗಲಿದೆ. ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತಿದೆ. ಪಂಚರಾಜ್ಯ ಚುನಾವಣೆಯಲ್ಲೂ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು. ಇವತ್ತು ಅಥವಾ ನಾಳೆ ದೇವೇಗೌಡರು ಕುಮಾರಸ್ವಾಮಿ ಜೊತೆ ಕುಳಿತು ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಗೊತ್ತಿಲ್ಲದ ದಾರಿಯಲ್ಲಿ ಹೋಗುವುದಕ್ಕಿಂತ ಗೊತ್ತಿರುವ ದಾರಿಯಲ್ಲಿ ಹೋಗುವುದು ಒಳಿತು ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ನಡೆಸಿದ ಸಂಧಾನ ವಿಫಲವಾಗಿದ್ದು, ಕಾಂಗ್ರೆಸ್ ತೊರೆಯುವುದು ಅಧಿಕೃತವಾಗಿದೆ. ಈ ಹಿನ್ನೆಲೆಯಲ್ಲಿ ತವರು ಪಕ್ಷವಾದ ಜೆಡಿಎಸ್ ವಾಪಸಾಗುವುದು ಬಹುತೇಕ ಖಚಿತವಾಗಿದೆ.

ಇನ್ನೊಂದೆಡೆ ಸಿ.ಎಂ.ಇಬ್ರಾಹಿಂ ಜೊತೆ ಮತ್ತೊಬ್ಬ ಅಲ್ಪ ಸಂಖ್ಯಾತ ಪ್ರಬಲ ನಾಯಕ ರೋಷನ್ ಬೇಗ್ ಕೂಡ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ತೆನೆ ಹೊರಲಿದ್ದಾರಂತೆ. ಈಗಾಗಲೇ ಕಾಂಗ್ರೆಸ್ ನಿಂದ ಶಿಸ್ತುಕ್ರಮ ಎದುರಿಸಿ ಮುಜುಗರಕ್ಕೊಳಗಾಗಿರುವ ರೋಷನ್ ಬೇಗ್ ಈ ಹಿಂದಿನಿಂದಲೂ ಬಿಜೆಪಿ ಸೇರ್ಪಡೆಗೆ ಉತ್ಸುಕರಾಗಿದ್ದರು. ಆದರೆ ಐಎಂಎ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ಬೇಗ್ ಸೇರ್ಪಡೆಗೆ ಮನಸ್ಸು ಮಾಡಿಲ್ಲ. ಹೀಗಾಗಿ ಈಗ ಬೇಗ್ ಗೆ ಜೆಡಿ ಎಸ್ ಮಾತ್ರ ಗತಿ ಎಂಬಂತಾಗಿದೆ. ಹೀಗಾಗಿ ಇಬ್ರಾಹಿಂ ಜೊತೆ ರೋಷನ್ ಬೇಗ್ ಕೂಡ ದಳಪತಿಗಳ ಜೊತೆ ಕೈಜೋಡಿಸಲಿದ್ದಾರಂತೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಲ್ಪಸಂಖ್ಯಾತ ಓಟುಗಳು ವಿಭಜನೆ ಆಗೋದು ಖಚಿತವಾಗಿದೆ.

Leave A Reply

Your email address will not be published.