ಕಾರ್ಕಳ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ಅಣ್ಣನನ್ನೇ‌ ಚಾಕುವಿನಿಂದ ತಿವಿದು ಕೊಂದ ತಮ್ಮ !!

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸ್ವಂತ ಅಣ್ಣನನ್ನೇ ತಮ್ಮ ಚಾಕುವಿನಿಂದ ಇರಿದು ಕೊಂದ ಅಮಾನವೀಯ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳದಲ್ಲಿ ಭಾನುವಾರ ನಡೆದಿದೆ.

ನಿಟ್ಟೆ ಬಜಕಳದ ಶೇಖರ್ (50) ಕೊಲೆಯಾದ ದುರ್ದೈವಿ ಹಾಗೂ ಅವರ ಕಿರಿಯ ಸಹೋದರ ರಾಜು (35) ಕೊಲೆ ಮಾಡಿದ ಆರೋಪಿ.

ಘಟನೆಯ ವಿವರ: ಪರಿಶಿಷ್ಟ ಜಾತಿಗೆ ಸೇರಿದ ಶೇಖರ್ ಮತ್ತು ರಾಜು ಸಹೋದರರಾಗಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಶೇಖರ್ ತನ್ನ ತಾಯಿಗೆ ಮಂಜೂರಾದ ಜಮೀನಿನಲ್ಲಿ ವಾಸವಾಗಿದ್ದರು. ಭಾನುವಾರ, ಶೇಖರ್ ತನ್ನ ಮನೆ ಅಂಗಳದಲ್ಲಿ ಕೆಲಸದಲ್ಲಿ ನಿರತನಾಗಿದ್ದ ವೇಳೆ ಅಲ್ಲಿಗೆ ಪಾನಮತ್ತನಾಗಿ ಆಗಮಿಸಿದ ರಾಜು ಕೆಲಸ ಮಾಡದಂತೆ ಆಕ್ಷೇಪಿಸಿದ್ದ. ಅದಕ್ಕೆ ಶೇಖರ್ ಕಿವಿಗೊಡದೆ ತನ್ನ ಪಾಡಿಗೆ ಕೆಲಸ ಮುಂದುವರಿಸಿದ್ದರು.ಈ ವೇಳೆ ‌ಬೆದರಿಕೆ ಹಾಕಿ ಮನೆಯೊಳಗೆ ತೆರಳಿದ ರಾಜು ಚೂರಿ ತಂದು ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಗೆ ತಿವಿದಿದ್ದಾನೆ. ಗಂಭೀರ ಗಾಯಗೊಂಡು ಅತೀವ ರಕ್ತಸ್ರಾವದಿಂದ ಶೇಖರ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ಇದೀಗ ಬಂಧಿಸಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave A Reply

Your email address will not be published.