ಶಾಲಾ ಕೊಠಡಿಯಲ್ಲಿದ್ದ ಅಪ್ರಾಪ್ತ ಬಾಲಕಿ ಹೊಲದಲ್ಲಿ ಅರೆ ಬೆತ್ತಲೆಯಾಗಿ ಪತ್ತೆ!! ಅತ್ಯಾಚಾರ ನಡೆಸಿ ಬಲವಂತವಾಗಿ ವಿಷ ಕುಡಿಸಿದ್ದ ಹಿರಿಯ ವಿದ್ಯಾರ್ಥಿಯ ಬಂಧನ

ಮೀರತ್: ಉತ್ತರ ಪ್ರದೇಶವು ಕಾನೂನು ಮತ್ತು ಸುವ್ಯವಸ್ಥೆಗೆ ಹೆಚ್ಚು ಒತ್ತು ನೀಡಿ ಸುಧಾರಣೆಯ ಪಥದಲ್ಲಿ ಸಾಗುತ್ತಿದ್ದರೂ ಕೆಲವೊಂದು ಕಡೆಗಳಲ್ಲಿ ದಲಿತರ ಮೇಲಿನ ಶೋಷಣೆ ಇನ್ನೂ ನಿಂತಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. ಶಾಲಾ ತರಗತಿಯಲ್ಲಿದ್ದ ಅಪ್ರಾಪ್ತ ದಲಿತ ಬಾಲಕಿಯೋರ್ವಳನ್ನು ಹಿರಿಯ ವಿದ್ಯಾರ್ಥಿಯೊಬ್ಬ ಪುಸಲಾಯಿಸಿ ಉಡುಗೊರೆ ಕೊಡುವ ನೆಪದಲ್ಲಿ ಹೊರಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ ಆ ಬಳಿಕ ಆಕೆಗೆ ಬಲವಂತವಾಗಿ ವಿಷ ಕುಡಿಸಿ ಹತ್ಯೆ ನಡೆಸಿದ ದುರಂತ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಮುಂಜಾನೆ ಮನೆಯಿಂದ ಹೊರಟು ತರಗತಿಯಲ್ಲಿದ್ದ ಬಾಲಕಿ, ತನ್ನ ಬ್ಯಾಗ್ ನ್ನು ಡೆಸ್ಕ್ ಮೇಲಿರಿಸಿ ನಾಪತ್ತೆಯಾಗಿದ್ದಳು. ಇದನ್ನು ಕಂಡ ಅಲ್ಲಿನ ಶಿಕ್ಷಕರು ಮನೆಯವರನ್ನು ಸಂಪರ್ಕಿಸಿದ್ದು ಎಲ್ಲೆಡೆ ಸುದ್ದಿ ಹಬ್ಬಿದಲ್ಲದೆ ಮನೆಯವರು ಆತಂಕಕ್ಕೆ ಒಳಗಾಗಿದ್ದರು. ಕೂಡಲೇ ಎಲ್ಲಾ ಕಡೆಗಳಲ್ಲೂ ಹುಡುಕಾಟ ಆರಂಭಿಸಿದಾಗ ಹೊಲವೊಂದರಲ್ಲಿ ಬಾಲಕಿ ಅರೆಬೆತ್ತಲೆಯಾಗಿ ಕಂಡು ಬಂದಿದ್ದಾಳೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯನ್ನು ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಆದರೆ ದುರದೃಷ್ಟ, ಸಂತ್ರಸ್ತೆ ಕೆಲ ಹೊತ್ತಿನಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಸಾವಿಗೆ ಕಾರಣನಾದ ಹಿರಿಯ ವಿದ್ಯಾರ್ಥಿ ಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.