ಕಳ್ಳತನಕ್ಕೆಂದು ಅಂಗನವಾಡಿಗೆ ನುಗ್ಗಿದ ವಿಚಿತ್ರ ಕಳ್ಳ |ಇಡೀ ರಾತ್ರಿ ಅಲ್ಲೇ ಇದ್ದು ತನ್ನ ಅನುಭವವನ್ನು ಕವನ ರೂಪದಲ್ಲಿ ಮೂರು ಪುಟ ಬರೆದು ಹೋದ ಪ್ರಚಂಡ ಕಳ್ಳ!

ರಾತ್ರೋರಾತ್ರಿ ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಒಳ ನುಗ್ಗಿದ‌ ಕಳ್ಳನೊಬ್ಬ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿ ನಂತರ ಅಲ್ಲೇ ಇದ್ದ ಪುಸ್ತಕದಲ್ಲಿ ಬರೋಬ್ಬರಿ 3 ಪುಟದಲ್ಲಿ ತನ್ನ ಅನಿಸಿಕೆ ಬರೆದು ಹೋಗಿದ್ದಾನೆ. ಅದು ಕೂಡಾ ಕವನ ರೂಪದಲ್ಲಿ.

ಈ ಘಟನೆ ನಡೆದಿರುವುದು ಭಾನುವಾರ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ. ಶಿಂಷಾ ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಳವು ಮಾಡಲು ಯತ್ನಿಸಿದ ಕಳ್ಳ ಬೀರುವಿನ ಬೀಗ ಮುರಿದಿದ್ದಾನೆ. ಅಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದೇ ಹೋದಾಗ ಅಡುಗೆ ಸಾಮಾಗ್ರಿ ತೆಗೆದುಕೊಂಡು ಗ್ಯಾಸ್ ಸ್ಟವ್ ಹಚ್ಚಿ ಪುಳಿಯೋಗರೆ ತಯಾರಿಸಿಕೊಂಡು ತಿಂದಿದ್ದಾನೆ.

ಅನಂತರ ಏನಾಯಿತೋ ಏನೋ ನೋಟ್ ಪುಸ್ತಕವೊಂದರಲ್ಲಿ ದುಂಡು ದುಂಡು ಅಕ್ಷರಗಳಲ್ಲಿ ಮೂರು ಪುಟ ದಿನಚರಿ, ಅನುಭವ, ಕವನ, ಕಥೆ ರೂಪದಲ್ಲಿ ಬರೆದು ಹಾಕಿದ್ದಾನೆ.

ಸೋಮವಾರ ಬೆಳಗ್ಗೆ ಎಂದಿನಂತೆ ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಕೇಂದ್ರದ ಬಾಗಿಲು ತೆರೆಯಲು ಹೋದಾಗ ಈ ಪ್ರಕರಣ ನಡೆದಿರುವುದು ತಿಳಿದು ಬಂದಿದೆ.

ಪಂಡಿತಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಮಹದೇವು ಸ್ಥಳ ಪರಿಶೀಲನೆ ಮಾಡಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave A Reply

Your email address will not be published.