ಮೇವು ಹಗರಣ : 5 ವರ್ಷ ಜೈಲು ಶಿಕ್ಷೆಗೊಳಗಾದ ಲಾಲೂ ಪ್ರಸಾದ್ ಯಾದವ್| ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಿಂದ ಆದೇಶ

ಹೊಸದಿಲ್ಲಿ : ಆರ್ ಜೆ ಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಸೋಮವಾರ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 60 ಲಕ್ಷ ರೂ.ದಂಡ ವಿಧಿಸಿದೆ.

ಫೆ.15 ರಂದು ಲಾಲು ಪ್ರಸಾದ್ ಅವರನ್ನು ರಾಂಚಿಯ ಡೊರಾಂಡಾ ಖಜಾನೆ ಪ್ರಕರಣದಲ್ಲಿ ದೋಷಿ ಎಂದು ವಿಶೇಷ ಸಿಬಿಐ ನ್ಯಾಯಾಲಯ ಮಂಗಳವಾರ ಘೋಷಿಸಿತ್ತು. ಲಾಲೂ ಪ್ರಸಾದ್ ಯಾದವ್ ಅವರು ದೋಷಿ ಎಂದು ಐದನೇ ಮೇವು ಹಗರಣದಲ್ಲಿ ತೀರ್ಪು ನೀಡಲಾಗಿದೆ.

ಲಾಲೂ ಪ್ರಸಾದ್ ಯಾದವ್ ಅವರನ್ನು ಮೊದಲು 2013 ರಲ್ಲಿ ತಪ್ಪಿತಸ್ಥ ಎಂದು ಗುರುತಿಸಲಾಗಿದ್ದು ನಂತರ 2017, 2018 ಮತ್ತು 2021ರಲ್ಲಿ ಮೂರು ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಗುರುತಿಸಲಾಗಿದೆ.

ಫೆ. 15 ರಂದು ಈ ಪ್ರಕರಣದಲ್ಲಿ ಲಾಲೂ ಅವರನ್ನು ದೋಷಿ ಎಂದು ಘೋಷಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲು ನಿರ್ಧರಿಸಲಾಗಿದೆ. ಯಾದವ್ ಅವರು ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ ಮೊತ್ತದ ಅಕ್ರಮ ಹಣ ಹಿಂಪಡೆದ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಿಂದ ತಪ್ಪಿರಸ್ಥರೆಂದು ಸಾಬೀತಾಗಿದೆ.

ಕಳೆದ ವಾರ ದೋಷಾರೋಪಣೆಯ ನಂತರ ಅನಾರೋಗ್ಯದ ಕಾರಣ ನೀಡಿ ಲಾಲು ಪ್ರಸಾದ್ ಹೊತ್ವಾರ್ ಜೈಲಿನಿಂದ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ( RIMS) ದಾಖಲಾಗಿದ್ದರು.

ಲಾಲು ಪ್ರಸಾದ್ ಯಾದವ್ ( 73) ಮೇವು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳಲ್ಲಿ ಈ ಹಿಂದೆ 14 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

Leave A Reply

Your email address will not be published.