ಸ್ಯಾಂಡಲ್ ವುಡ್ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತರಾಗಿದ್ದಾರೆ.

ರಾಜೇಶ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಕಸ್ತೂರಬಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಜೇಶ್ ಅವರು ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ರಾಜೇಶ್ ಅವರಿಗೆ 82 ವರ್ಷ ವಯಸ್ಸಾಗಿತ್ತು.

ಹಲವು ದಶಕಗಳಿಂದ ಚಿತ್ರರಂಗದಲ್ಲಿ ಅನುಭವ ಹೊಂದಿರುವ ಅವರು ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ದೂರ ಉಳಿದುಕೊಂಡಿದ್ದರು.

ರಾಜೇಶ್ ಅವರು ಎಪ್ರಿಲ್ 15, 1935 ರಂದು ಬೆಂಗಳೂರಿನಲ್ಲಿ ಜನಿಸಿದರು. ಎಲ್ಲ ಮಕ್ಕಳಂತೆ ಬಾಲ್ಯವನ್ನು ಕಳೆದ ರಾಜೇಶ್ ಅವರು ಪಿ ಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು‌. ನಂತರ ಸಿನಿಮಾ ರಂಗ ಪ್ರವೇಶ ಮಾಡಿದ ರಾಜೇಶ್ ಅವರು ರಾಜ್ ಕುಮಾರ್, ಉದಯಕುಮಾರ್, ಅವರ ಸಮಕಾಲೀನರಾಗಿ ಮಹಾನ್ ಪ್ರತಿಭೆಗಳ ಕಾಲದಲ್ಲಿ ಕೂಡಾ ತಮ್ಮದೆ ಆದ ವಿಶಿಷ್ಟ ಛಾಪನ್ನು ಚಿತ್ರರಂಗದಲ್ಲಿ ಮೂಡಿಸಿದ್ದರು.

ರಾಜೇಶ್ ಅವರು ನಾಯಕರಾಗದೆ, ನಾಯಕನ ಅಥವಾ ನಾಯಕಿಯ ಅಣ್ಣನಂತಹ ಪಾತ್ರಗಳಲ್ಲಿ ಅಭಿನಯಿಸಿದಾಗ ಸಹಾ ಅದು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ‘ ಕರ್ಣ’ ಚಿತ್ರದಲ್ಲಿ ಡಾಕ್ಟರ್ ಆಗಿ ಅಭಿನಯಿಸಿದ ಅವರ ಗಾಂಭೀರ್ಯ ಕೂಡಾ ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು. ರಾಜೇಶ್ ಅವರ ಭಾಷಾ ಉಚ್ಛಾರ, ಭಾವಾಭಿನಯ ಉತ್ತಮ ಗುಣ ಮಟ್ಟದ್ದಾಗಿತ್ತು.

ರಾಜೇಶ್ ಅವರನ್ನು ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಇವಕ್ಕೆಲ್ಲ ಶಿಖರ ಪ್ರಾಯದಂತೆ ಧಾರವಾಡ ವಿಶ್ವವಿದ್ಯಾಲಯವು ರಾಜೇಶ್ ಅವರಿಗೆ ಡಾಕ್ಟರೇಟ್ ಗೌರವವನ್ನು ಸಲ್ಲಿಸಿತ್ತು.

Leave A Reply

Your email address will not be published.